ಇಂದು ಜೂನ್ 25. ಇವತ್ತಿಗೆ ಇಂದಿರಾ ಗಾಂಧಿಯವರು ದೇಶದ ಮೇಲೆ ತುರ್ತುಸ್ಥಿತಿ ಘೋಷಿಸಿ 50 ವರ್ಶಗಳಾಗುತ್ತವೆ. ಕರ್ನಾಟಕವನ್ನೂ ಒಳಗೊಂಡಂತೆ ದಕ್ಷಿಣದ ಕೆಲವು ರಾಜ್ಯಗಳಲ್ಲಿ ತುರ್ತುಸ್ಥಿತಿಯ ಸರ್ವಾಧಿಕಾರದ ಕ್ರೌರ್ಯವು ಸಾಪೇಕ್ಷವಾಗಿ ನೋಡಿದರೆ ಉತ್ತರ ಭಾರತದಷ್ಟು ಘನಘೋರವಾಗಿರಲಿಲ್ಲ. ಕರ್ನಾಟಕದಲ್ಲಿ ಅದಕ್ಕೆ ದೇವರಾಜ್ ಅರಸು ಅವರ ಜನಪರ ಕಾರ್ಯಕ್ರಮಗಳ ಮುಲಾಮು ಒಂದು ಕಾರಣವಾಗಿರಬಹುದು. ತುರ್ತುಸ್ಥಿತಿಯನ್ನು ಹಿಂತೆಗೆದುಕೊಂಡ ನಂತರ ನಡೆದ ಚುನಾವಣೆಗಳಲ್ಲಿ ಇತರ ಕಡೆಗಳಲ್ಲಿ ಇಂದಿರಾ ಗಾಂಧಿ ಮತ್ತು ಅವರ ಪಕ್ಷ ಭೀಕರವಾದ ಸೋಲುಂಡರೂ ಕರ್ನಾಟಕ ಮತ್ತು ಆಂಧ್ರದಲ್ಲಿ ಪ್ರಚಂಡ ಬಹುಮತದಿಂದ ಗೆದ್ದು ಬಂದದ್ದೂ ಇದೆ ಕಾರಣಕ್ಕೆ. ಅದೇನೇ ಇರಲಿ. ಈಗ ಭಾರತ ಅಂದಿನ ಘೋಷಿತ ಸರ್ವಾಧಿಕಾರಕ್ಕಿಂತ ಭೀಕರವಾದ ಮತ್ತು ಸುದೀರ್ಘವಾದ ಅಘೋಷಿತ ಸರ್ವಾಧಿಕಾರವನ್ನು ಮಾತ್ರವಲ್ಲದೆ ಫ್ಯಾಶಿಸ್ತ್ ಸರ್ವಾಧಿಕಾರವನ್ನು ಅನುಭವಿಸುತ್ತದೆ. ಇಂದಿರಾ ಸರ್ವಾಧಿಕಾರದಿಂದ ಭಾರತ ಸರಿಯಾದ ಪಾಠ ಕಲಿಯದೇ ಇದ್ದುದೇ ಫ್ಯಾಶಿಸ್ಟ್ ಸರ್ವಾಧಿಕಾರಕ್ಕೆ ದಾರಿ ಮಾಡಿಕೊಟ್ಟಿರಬಹುದೇ?
ಏಕೆಂದರೆ ಭಾರತವು ಅನುಭವಿಸಿದ ಆ ಮೊದಲನೇ ಸರ್ವಾಧಿಕಾರದ ವಿರೋಧದ ರಾಜಕೀಯವು ಆಗಿನ್ನೂ ಅಷ್ಟು ಸಾರ್ವಜನಿಕರಾಗಿ ಮಾನ್ಯರಾಗಿರದ ಫ್ಯಾಶಿಸ್ಟ್ ಸರ್ವಾಧಿಕಾರೀ ಶಕ್ತಿಗಳಾದ ಸಂಘಪರಿವಾರವನ್ನೂ ಒಳಗೊಂಡು ಅದಕ್ಕೆ ನಾಯಕತ್ವ ಸ್ಥಾನ ಕೊಟ್ಟಿತು. ಆ ಮೂಲಕ ಫ್ಯಾಶಿಸ್ತರಿಗೆ ಪ್ರಜಾತಾಂತ್ರಿಕ ಮಾನ್ಯತೆಯನ್ನು ಗಳಿಸಿಕೊಟ್ಟಿತು. ಅದನ್ನೇ ಬಂಡವಾಳವಾಗಿಸಿಕೊಂಡ ಸಂಘಿ ಫ್ಯಾಶಿಸ್ಟರು “ಪ್ರಜಾತಂತ್ರದಲ್ಲೂ” ಈಗ ಹೆಮ್ಮರವಾಗಿ ಬೆಳೆದಿದ್ದಾರೆ.
ಈಗ ಹಿಂತಿರುಗಿ ನೋಡಿದರೆ ಇಂದಿರಾ ಸರ್ವಾಧಿಕಾರವನ್ನು ಕೇವಲ ಚುನಾವಣಾ ಪ್ರಜಾತಂತ್ರದ ನಿರಾಕರಣೆಯನ್ನಾಗಿ ಮಾತ್ರ ನೋಡಿದ್ದು ತಪ್ಪು ಎಂದು ಭಾವಿಸಬಹುದೇ? ಸ್ವಾತಂತ್ರ್ಯಾ ನಂತರದಲ್ಲೂ ದೇಶದಲ್ಲಿ ಚುನಾವಣಾ ಪ್ರಜಾತಂತ್ರದ ಶಾಸ್ತ್ರಗಳು ನಡೆಯುತ್ತಿದ್ದರೂ ವಾಸ್ತವದಲ್ಲಿ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಸರ್ವಾಧಿಕಾರದ ಮುಂದುವರಿಕೆಯೇ ರಾಜಕೀಯ ಸರ್ವಾಧಿಕಾರಕ್ಕೂ ಕಾರಣವಾಯಿತು ಎಂಬ ಪಾಠ ಕಲಿಯಬಹುದೇ? ಹಾಗೂ ಸಾಂಸ್ಕೃತಿಕ್ಪ್ರ, ಆರ್ಥಿಕ, ಸಾಮಾಜಿಕ ಸರ್ವಾಧಿಕಾರಗಳನ್ನು ಪ್ರತಿಪಾದಿಸುವ ಶಕ್ತಿಗಳನ್ನು, ರಾಜಕೀಯ ಸರ್ವಾಧಿಕಾರಿ ವಿರ್ರೋಧಿ ಹೋರಾಟದಲ್ಲಿ ಒಳಗೊಂಡಿದ್ದು ಸರ್ವಾಧಿಕಾರ ವಿರೋಧಿ ಹೋರಾಟ ಎಸಗಿದ ಬಹುದೊಡ್ಡ ಪ್ರಮಾದವೆಂದು ಅರಿಯಬಹುದೇ? ಹಾಗಿದ್ದಲ್ಲಿ ಇಂದಿನ ಅಘೋಷಿತ ಫ್ಯಾಶಿಸ್ಟ್ ಸರ್ವಾಧಿಕಾರಿ ವಿರೋಧಿ ಹೋರಾಟವು ಅಂದಿನ ತಪ್ಪುಗಳಿಂದ ಪಾಠ ಕಲಿತು ಫ್ಯಾಶಿಸ್ತ್ ಸರ್ವಾಧಿಕಾರಿ ವಿರೋಧಿ ಹೋರಾಟವನ್ನು ಕೇವಲ ರಾಜಕೀಯ ಅಥವಾ ಚುನಾವಣಾ ಸರ್ವಾಧಿಕಾರಕ್ಕೆ ಮಾತ್ರ ಸೀಮಿತಗೊಳಿಸದೆ ಸರ್ವಾಧಿಕಾರಿ ವಿರೋಧಿ ಹೋರಾಟವನ್ನು ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೂ ವಿಸ್ತರಿಸುವುದೇ ?
ಆದರೆ ವಿಪರ್ಯಾಸವೆಂದರೆ ಇಂದಿರಾ ಸರ್ವಾಧಿಕಾರ ದ ವಿದ್ಯಮಾನದಿಂದ ಪಾಠ ಕಲಿಯುವ ಬದಲಿಗೆ ಸಂಘಿಗಳ ಹಾಲಿ ಅಘೋಷಿತ ಫ್ಯಾಶಿಸ್ಟ್ ಸರ್ವಾಧಿಕಾರಕ್ಕಿಂತ ಇಂದಿರಾ ಸರ್ವಾಧಿಕಾರ ಪ್ರಗತಿಪರವಾಗಿತ್ತು ಅಥವಾ ಅನಿವಾರ್ಯವಾಗಿತ್ತು ಎಂಬ ವಾದಗಳು ಕೂಡ ಪ್ರಗತಿಪರ ವಲಯದಿಂದಲೇ ಹುಟ್ಟಿಕೊಳ್ಳುತ್ತಿದೆ. ಈ ಎಲ್ಲಾ ವಾದಗಳನ್ನು ಇಂದಿರಾ ಗಾಂಧಿಯವರೇ ತುರ್ತುಸ್ಥಿತಿ ಘೋಷಣೆ ಮಾಡುವಾಗ ಉಲ್ಲೇಖಿಸಿದ್ದರು ಮತ್ತು ಅದನ್ನು ಕೆಲವು ಕಮ್ಯುನಿಸ್ಟರನ್ನೂ ಒಳಗೊಂಡಂತೆ ಹಲವು ಪ್ರಗತಿಪರರು ನಂಬಿದ್ದರು. ಆದರೆ ತುರ್ತುಸ್ಥಿತಿಯ ಕ್ರೌರ್ಯ ಮತ್ತು ಆ ಅವಧಿಯಲ್ಲಿ ಮತ್ತು ಆ ನಂತರದಲ್ಲಿ ಇಂದಿರಾ ಗಾಂಧಿಯವರ ರಾಜಕೀಯವನ್ನು ಗಮನಿಸಿ ಅನುಭವಿಸಿ ತಮ್ಮ ಅಭಿಪ್ರಾಯಗಳನ್ನು ತಿದ್ದುಕೊಂಡು ತುರ್ತುಸ್ಥಿತಿಯನ್ನು ಖಂಡಿಸಿದ್ದರು. ಆದರೆ ಈಗ ಮತ್ತೆ ಇಂದಿರಾ ಸಮರ್ಥನೆಗಳಿಗೆ ಹೊಸ ಜೀವ ಬಂದಿರುವುದು ಸಂದರ್ಭದ ಅಸಹಾಯಕತೆಯನ್ನಷ್ಟೇ ಹೇಳುತ್ತಿದೆ.
ಇಂದಿರಾ ಸರ್ವಾಧಿಕಾರ ಸಮರ್ಥನೀಯವೇ?
ಇಂದಿರಾ ಗಾಂಧಿ 1969 ರಿಂದ 20 ಅಂಶಗಳ ಕಾರ್ಯಕ್ರಮ, ಬ್ಯಾಂಕ್ ರಾಷ್ಟ್ರೀಕರಣ , ಭೂ ಸುಧಾರಣೆ , ರಾಜಧನ ರದ್ಧತಿ ಯಂತ ಕ್ರಾಂತಿಕಾರಿ ಕಾರ್ಯಕ್ರಮಗಳನ್ನು ಜಾರಿ ಮಾಡಿದರು. ಕಮ್ಯುನಿಸ್ತ ರಷ್ಯಾ ಜೊತೆ ಸ್ನೇಹದಿಂದದ್ದರು. ಜಗತ್ತಿನ ಬಂಡವಾಳಶಾಹಿ ರಾಷ್ಟ್ರಗಳ ನಾಯಕ ಅಮೆರಿಕಾಗೆ ಇದು ಸರಿ ಬರಲಿಲ್ಲ. ಅಮೇರಿಕ ಇಂದಿರಾ ಸರ್ಕಾರವನ್ನು ಕಿತ್ತೊಗೆಯಲು ವಿರೋಧ ಪಕ್ಷಗಳೊಂದಿಗೆ ಕೈಗೂಡಿಸಿತ್ತು. ಹೀಗಾಗಿ ಇಂದಿರಾ ಗಾಂಧಿಯವರು ಸರ್ವಾಧಿಕಾರವನ್ನು ಘೋಷಿಸಿದ್ದು ತನ್ನ ಅಧಿಕಾರವನ್ನು ಕಾಪಾಡಿಕೊಳ್ಳಲು ಅಲ್ಲ. ಬದಲಿಗೆ ಅಮೇರಿಕಾದ ಷಡ್ಯಂತ್ರದಿಂದ ಭಾರತವನ್ನು ಬಚಾವು ಮಾಡಲು ಎಂಬುದು ಎಮರ್ಜೆನ್ಸಿಯ ನವ ಪ್ರತಿಪಾದಕರ ವಾದಗಳಲ್ಲಿ ಒಂದು.
ಆ ಕಾಲಘಟ್ಟದಲ್ಲಿ ಅಮೇರಿಕಾದ ಸಿಐಎ ಚಿಲಿ , ಕ್ಯೂಬಾ ಇನ್ನಿತರ ಅಮೇರಿಕ ವಿರೋಧಿ ಸಮಾಜವಾದಿ-ಕಮ್ಯುನಿಸ್ತ ಮತ್ತು ನೈಜ ರಾಷ್ಟ್ರವಾದಿ ದೇಶಗಳಲ್ಲಿ ಅಸ್ಥಿರತೆಯನ್ನು ಉಂಟು ಮಾಡುತ್ತಿತ್ತು ಹಾಗೂ ಅಲ್ಲಿಯ ಪ್ರಧಾನಿ -ಅಧ್ಯಕ್ಷರೂಗಳನ್ನು ಕೊಂದು ಹಾಕಿ, ತಮ್ಮ ಕೈಗೊಂಬೆ ಸರ್ಕಾರವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದ್ದದ್ದು ನಿಜ . ಇಂದಿರಾಗಾಂಧಿ ಸರ್ಕಾರದ ವಿರೋಧಿಗಳಿಗೂ , ಅದರಲ್ಲೂ ಸಂಘಪರಿವಾರಕ್ಕೆ , ಅಮೇರಿಕಾದ ಸಂಪರ್ಕವಿದ್ದದ್ದು ನಿಜ. ಮತ್ತು ಇಂದಿರಾ ವಿರೋಧಿ ಬಣದ ನಾಯಕತ್ವ ವಹಿಸಿದ್ದ ಜಯಪ್ರಕಾಶ್ ನಾರಾಯಣರು ಪೊಲೀಸ್ ಮತ್ತು ಸೈನ್ಯಕ್ಕೆ ಸರ್ಕಾರದೊಂದಿಗೆ ಸಹಕರಿಸದೇ ಇರಲು ಕರೆಕೊಟ್ಟು ರಾಜಕೀಯ ಅಸ್ಥಿರತೆಗೆ ಕಾರಣರಾಗಿದ್ದು ನಿಜ. ಆದರೆ ಅಷ್ಟು ಮಾತ್ರಕ್ಕೆ ಅಮೆರಿಕಾ ಇಂದಿರಾ ಗಾಂಧಿ ಸರ್ಕಾರದ ವಿರೋಧಿಯಾಗಿತ್ತೆಂಬುದು ನಿಜವೇ?
ಆ ಕಾಲಘಟ್ಟದಲ್ಲಿ ಅಮೇರಿಕ ಸಾಮ್ರಾಜ್ಯಶಾಹಿಗಳು ಸಮಾಜವಾದಿ-ಕಮ್ಯುನಿಸ್ಟ್, ಹಾಗೂ ನೈಜ ರಾಷ್ಟ್ರವಾದಿ ದೇಶಗಳ ನಾಯಕರ ಕೊಲೆಗಳನ್ನು ಮಾಡುತ್ತಿದ್ದರು. ಮತ್ತು ಅಧಿಕಾರ ಅಸ್ಥಿರತೆಗೆ ಪ್ರಯತ್ನಿಸುತ್ತಿದ್ದರು. ಏಕೆಂದರೆ ಈ ದೇಶಗಳು ತಾವು ಸ್ವಾತಂತ್ರ್ಯ ಪಡೆದ ನಂತರ ತಮ್ಮ ದೇಶದಲ್ಲಿದ್ದ ಅಮೇರಿಕ-ಇಂಗ್ಲೆಂಡ್- ಫ್ರಾನ್ಸ್ ಇನ್ನಿತ್ಯಾದಿ ವಸಾಹತುಶಾಹಿ-ಸಾಮ್ರಾಜ್ಯಶಾಹಿ ದೇಶಗಳ ಹೂಡಿಕೆಯನ್ನು ರಾಷ್ಟ್ರೀಕರಣ ಮಾಡಿ ಆ ದೇಶಗಳ ಆರ್ಥಿಕ ಹಿತಾಸಕ್ತಿಗೆ ಪೆಟ್ಟುಕೊಟ್ಟಿದ್ದವು. ತಮ್ಮ ದೇಶದ ಬಂಡವಾಳಿಗರ ಹಿತಾಸಕ್ತಿಗಿಂತ ರೈತ-ಕಾರ್ಮಿಕರ ಹಿತಾಸಕ್ತಿಗೆ ಪ್ರಧಾನ ಒತ್ತು ಕೊಟ್ಟು ತಮ್ಮ ದೇಶದ ದೊಡ್ಡ ಬಂಡವಾಳಿಗರ ದ್ವೇಷವನ್ನೂ ಕಟ್ಟಿಕೊಂಡಿದ್ದರು. ಆ ಕಾರಣಕ್ಕಾಗಿಯೇ ಆ ದೇಶದ ಬಂಡವಾಳಶಾಹಿ ಶಕ್ತಿಗಳು ಅಮೇರಿಕಾದ ಜೊತೆ ಸಂಚಿನಲ್ಲಿ ಪಾಲ್ಗೊಂಡರು. ಹಾಗೂ ತಮ್ಮ ದೇಶಗಳಲ್ಲಿ ನೈಜ ಸಮಾಜವಾದಿ ಮತ್ತು ಕಮ್ಯುನಿಸ್ಟ್ ಶಕ್ತಿಗಳನ್ನು ರಾಜಕೀಯವಾಗಿ ಬೆಳೆಯಲು ಅವಕಾಶ ಮಾಡಿಕೊಟ್ಟರು. ಈ ಕಾರಣಗಳಿಂದಾಗಿ -ಅವು ಅಮೇರಿಕ ಸಾಮ್ರಾಜ್ಯಶಾಹಿ ಆರ್ಥಿಕತೆಗೆ ಪೆಟ್ಟು ಕೊಟ್ಟಿದ್ದು, ಮತ್ತು ಬಂಡವಾಳಶಾಹಿ ವಿರೋಧಿ ನೈಜ ಸಮಾಜವಾದಿ ಮಾರ್ಗ ಅನುಸರಿಸಿದ್ದರಿಂದಾಗಿ -ಅಮೇರಿಕ ಆ ಸರ್ಕಾರಗಳನ್ನು ಅಸ್ಥಿರಗೊಳಿಸಿತು. ಆದರೆ ಇಂದಿರಾ ಗಾಂಧಿ ಸರ್ಕಾರವಾಗಲಿ ಅಥವಾ ಅದಕ್ಕೆ ಹಿಂದಿನ ನೆಹರೂ ಸರ್ಕಾರವಾಗಲೇ ಬಾಯಲ್ಲಿ ಎಷ್ಟೇ ಸಮಾಜವಾದದ ಮಾತುಗಳನ್ನು ಆಡಿದರೂ ಅಮೇರಿಕಾ ವಿರೋಧಿಯೇನೂ ಆಗಿರಲಿಲ್ಲ.
ಹಾಗೆ ನೋಡಿದರೆ ಚಿಲಿ , ಕ್ಯೂಬಾಗಳು, 1955ರ ತನಕ ಅಧಿಕಾರದಲ್ಲಿದ್ದ ಇರಾನಿನ ಸಮಾಜವಾದಿ ರಾಷ್ಟ್ರವಾದಿ ಮುಸಾದಿಕ್ ಸರ್ಕಾರಗಳು ತಮ್ಮ ದೇಶಗಳಿದ್ದ ವಿದೇಶಿ ಬಂಡವಾಳ ಹೂಡಿಕೆ, ಆಸ್ತಿಪಾಸ್ತಿಗಳನ್ನು ರಾಷ್ಟ್ರೀಕರಣ ಮಾಡಿದರು. ಆದರೆ ಭಾರತದಲ್ಲಿ ನೆಹರೂ ಸರ್ಕಾರವಾಗಲೀ, ಇಂದಿರಾ ಸರ್ಕಾರವಾಗಲೀ, ವಿದೇಶಿ ಬಂಡವಾಳವನ್ನು ರಾಷ್ಟ್ರೀಕರಣ ಮಾಡುವುದಿರಲಿ ಹೆಚ್ಚಿನ ವಿದೇಶಿ ಹೂಡಿಕೆಗೆ ಅವಕಾಶ ಮಾಡಿಕೊಟ್ಟರು.
ದೇಶದ ದೊಡ್ಡ ಸಾರ್ವಜನಿಕ ಕೈಗಾರಿಕೆ ಮತ್ತು ರಕ್ಷಣಾ ಕ್ಷೇತ್ರಕ್ಕೆ ಸೋವಿಯತ್ ರಷ್ಯಾದ ಸಹಕಾರ ಮತ್ತು ಹೂಡಿಕೆಗಳಿದ್ದರೂ, 1947ರಿಂದಲೂ ಭಾರತದ ಕೃಷಿ ಕ್ಷೇತ್ರವನ್ನು ಅಮೆರಿಕಾದ ನವ ವಸಾಹತುವಾಗಲು ನೆಹರೂ ಸರ್ಕಾರವೇ ಅವಕಾಶ ಮಾಡಿಕೊಟ್ಟಿತ್ತು. ಆ ನಂತರ 1965 ರ ನಂತರ ಭಾರತದಲ್ಲಿ ಅಮೇರಿಕ ನಿರ್ದೇಶಿತ “ಹಸಿರು ಕ್ರಾಂತಿ ” ಯನ್ನು “ಕೆಂಪುಕ್ರಾಂತಿ” ಯನ್ನು ತಡೆಯಲೆಂದೇ ಇಂದಿರಾ ಸರ್ಕಾರ ಜಾರಿ ಮಾಡಿತು. ಇನ್ನು 1969 ರ ಬ್ಯಾಂಕ್ ರಾಷ್ಟ್ರೀಕರಣ ಜನಸಾಮಾನ್ಯರಿಗೆ ಬ್ಯಾಂಕ್ ಸೌಲಭ್ಯವನ್ನು ಕೊಡುವುದಕ್ಕಿಂತಲೂ ಹೆಚ್ಚಾಗಿ ಭಾರತದ ದೊಡ್ಡ ಬಂಡವಾಳಿಗರಿಗೆ ರಿಯಾಯತಿ ದರದಲ್ಲಿ ಹಣಕಾಸು ಬಂಡವಾಳ ಒದಗಿಸುತ್ತಾ ದೇಶವನ್ನು ಬಂಡವಾಳಶಾಹಿ ಮಾರ್ಗದಲ್ಲಿ ಬೆಳೆಸುವ ಉದ್ದೇಶವನ್ನು ಹೊಂದಿತ್ತು. ಅರೆಮನಸ್ಸಿನಿಂದ ಘೋಷಿಸಲಾದ ಭೂ ಸುಧಾರಣೆಗಳು ಜನಚಳವಳಿ ಗಟ್ಟಿಯಾಗಿದ್ದ ಕಡೆ ಜಾರಿಯಾದವಾಗಲೀ ಬೇರೆಲ್ಲೂ ಗಟ್ಟಿಯಾಗಿ ಜಾರಿ ಮಾಡಿ ಊಳಿಗಮಾನ್ಯ ಶಕ್ತಿಗಳನ್ನು ಎದಿರು ಹಾಕಿಕೊಳ್ಳುವ ಇರಾದೆ ಯನ್ನೇ ಇಂದಿರಾ ಸರ್ಕಾರ್ರ ತೋರಲಿಲ್ಲ.
ರಾಜಕೀಯವಾಗಿಯೂ ಇಂದಿರಾ ಗಾಂಧಿಯವರು ಪ್ರಬಲ ಕಮ್ಯುನಿಸ್ಟ್ ವಿರೋಧಿ ಆಗಿದ್ದರು. ವಾಸ್ತವದಲ್ಲಿ 1958 ರಲ್ಲಿ ಕೇರಳದಲ್ಲಿ ಅಧಿಕಾರದಲ್ಲಿದ್ದ ಜಗತ್ತಿನ ಪ್ರಪ್ರಥಮ ಚುನಾಯಿತ ಕಮ್ಯುನಿಸ್ಟ್ ಸರ್ಕಾರವನ್ನುಕಿತ್ತುಹಾಕಿದ ಕೀರ್ತಿಯೂ ಇಂದಿರಾ ಗಾಂಧಿಯವರಿಗೆ ಸೇರಿದ್ದು . 1971 ರಲ್ಲಿ ಅಧಿಕಾರಕ್ಕೆ ಬಂದಾಗ ಕೆಲವು ಕಮ್ಯುನಿಸ್ಟರು ಇಂದಿರಾ ಅವರ ಎಡ ಪದಪುಂಜಗಳಿಗೆ ಮನಸೋತು ಅವರಲ್ಲಿ ಸಮಾಜವಾದಿಯನ್ನು ಕಂಡರಾದರೂ , ಇಂದಿರಾ ಅಧಿಕಾರದ ಒಟ್ಟಾರೆ ಅವಧಿಯಲ್ಲಿ ಅವರು ಭಾರತದ ದೊಡ್ಡ ಬಂಡವಾಳಶಾಹಿ ಟಾಟಾ ಅವರ ನೇತೃತ್ವದಲ್ಲಿ ಆಗ್ರಹಿಸಲಾಗಿದ್ದ “ಟಾಟಾ ಪ್ಲಾನ್ ” ಅನ್ನು ಅನುಸರಿಸಿದರು. ತುರ್ತುಸ್ಥಿತಿಯನ್ನು ಕೂಡ ಕಾರ್ಮಿಕರಲ್ಲಿ ಶಿಸ್ತು ಕ್ರಮ ತರುವ ಕ್ರಮ ಎಂದು ಸ್ವಾಗತಿಸಿದ್ದು, ಹಾದಿ ಹೊಗಳಿದ್ದು, ಭಾರತದ ದೊಡ್ಡ ಬಂಡವಾಳಶಾಹಿಗಳೇ. ಆ ಅವಧಿಯಲ್ಲಿ ನಡೆದ ಅತಿ ಭೀಕರ ಕೋಮುವಾದಿ ಸಂತಾನ ಹರಣ ಶಸ್ತ್ರ ಚಿಕಿತ್ಸೆಯನ್ನು ಟಾಟಾ ಅವರು ದೊಡ್ಡ ದೇಶಪ್ರೇಮಿ ಕ್ರಮವೆಂದು ಕೊಂಡಾಡಿದ್ದರು.
ಮತ್ತೊಂದು ಕಡೆ ತುರ್ತುಸ್ಥಿತಿಯಲ್ಲಿ ತೀವ್ರವಾದ ದಬ್ಬಾಳಿಕೆಗೆ ಮತ್ತು ದೌರ್ಜನ್ಯಗಳಿಗೆ ಒಳಗಾದದ್ದು ಕೂಡ ಕೂಲಿ ಕಾರ್ಮಿಕರು, ಸಮಾಜವಾದಿಗಳು , ಕಮ್ಯುನಿಸ್ಟರು ಮತ್ತು ನಕ್ಸಲೈಟರೇ . ಬಂಡವಾಳಶಾಹಿ, ಅಮೇರಿಕ ಪರ ಆರೆಸ್ಸೆಸ್ ವಾದಿಗಳು ಪ್ರಾರಂಭದಲ್ಲಿ ತುರ್ತುಸ್ಥಿತಿಯ ವಿರುದ್ಧವಿದ್ದರೂ ನಂತರದಲ್ಲಿ ಪೂರ್ಣವಾಗಿ ಇಂದಿರಾ ಪರವಾದರೂ. ಅವರ ಇಂದಿರಾ ಪರತೆ 1980ರಲ್ಲಿ ಎರಡನೇ ಬಾರಿ ಇಂದಿರಾ ಅಧಿಕಾರಕ್ಕೆ ಬಂದ ನಂತರವೂ ಅತ್ಯಂತ ಅಭಾಧಿತವಾಗಿ ಮುಂದುವರೆಯಿತು. ಹೀಗಾಗಿ ಇಂದಿರಾ ಸರ್ಕಾರ ಮತ್ತು ಆ ನಂತರದ ಸರ್ವಾಧಿಕಾರ ಚಿಲಿ ಅಥವಾ ಕ್ಯೂಬಾಗಳಂತೆ ಅಮೆರಿಕಾ ಸಾಮ್ರಾಜ್ಯಶಾಹಿ ವಿರೋಧಿಯೂ ಆಗಿರಲಿಲ್ಲ, ಬಂಡವಾಳಶಾಹಿ ವಿರೋಧಿಯೂ ಆಗಿರಲಿಲ್ಲ, ಸಮಾಜವಾದಿ-ಕಮ್ಯುನಿಸ್ಟ್ ಪರವೂ ಆಗಿರಲಿಲ್ಲ. ಹೀಗಾಗಿ ಅಮೆರಿಕಕ್ಕೆ ಮತ್ತು ಆರೆಸ್ಸೆಸ್ಸಿಗೆ ಈ ಕಾರಣಗಳಿಗಾಗಿ ಇಂದಿರಾ ಅವರನ್ನು ಪದಚ್ಯುತ ಗೊಳಿಸಬೇಕೆಂಬ ಅಗತ್ಯವೇ ಇರಲಿಲ್ಲ.
ಆದ್ದರಿಂದ ದೇಶದ ನೈಜ ಪ್ರಜಾತಂತ್ರವಾದಿಗಳು ಎಮರ್ಜೆನ್ಸಿಯ ಪ್ರಮಾದಗಳನ್ನು ಹಾಗೂ ಅದನ್ನು ಸಾಧ್ಯಗೊಳಿಸಿದ ರಾಜಕೀಯ-ಆರ್ಥಿಕ ಸಂದರ್ಭವನ್ನೂ ಹಾಗೂ ಅದಕ್ಕೆ ಅವಕಾಶ ಮಾಡಿಕೊಟ್ಟ ಸಾಂವಿಧಾನಿಕ ಸಾಧ್ಯತೆಗಳನ್ನೂ ಇನ್ನಷ್ಟು ಆಳವಾಗಿ ಅರ್ಥಮಾಡಿಕೊಂಡು ಅಂದಿನ ಮತ್ತು ಇಂದಿನ ಸರ್ವಾಧಿಕಾರಗಳಲ್ಲಿ ಇರುವ ವರ್ಗ ಹಿತಾಸಕ್ತಿಯ ಸಾರವನ್ನು ಗ್ರಹಿಸುವ ಅಗತ್ಯವಿದೆ. ಆದ್ದರಿಂದ ಮತ್ತೆ ಈ ದೇಶದಲ್ಲಿ ಅಂಥಾ ಪ್ರಮಾದ ಉಂಟಾಗದಂತೆ ಎಚ್ಚರದಿಂದಿರಲು ಈ ದಿನವನ್ನು ಈ ದೇಶದ ಜನತೆ ಎಚ್ಚರಿಕೆಯ ದಿನವನ್ನಾಗಿ ನೆನಪಿನಲ್ಲಿ ಇಟ್ಟುಕೊಳ್ಳುವುದು ಅತ್ಯಗತ್ಯ.
ಘೋಷಿತಕ್ಕಿಂತಲೂ ಭೀಕರವಾಗಿರುವ ಅಘೋಷಿತ ಎಮರ್ಜೆನ್ಸಿ
ಆದರೆ ಪ್ರತಿವರ್ಷದಂತೆ ಈ ವರ್ಷವೂ ಸಹ ಸಂಘಪರಿವಾರ ತಾವು ಸಾವಿರ ಗಾಯಗಳ ಮೂಲಕ ಕಳೆದ ಹನ್ನೊಂದು ವರ್ಷಗಳಿಂದ ಸಂವಿಧಾನಕೆ ಮಾಡಿರುವ ಗಾಯಗಳನ್ನು ಮರೆಸಿ 50 ವರ್ಷಗಳ ಕೆಳಗೆ ಇಂದಿರಾ ಗಾಂಧಿ ಸಂವಿಧಾನ ದ ಮೇಲೆ ಮಾಡಿದ ಪ್ರಹಾರವನ್ನು ನೆನಪಿಸುತ್ತಿದ್ದಾರೆ…
ಅದರ ಮೂಲಕ ಎಮರ್ಜೆನ್ಸಿಗಿಂತ ಭೀಕರವಾದ ತಮ್ಮ ಫ್ಯಾಶಿಸ್ತ ಆಳ್ವಿಕೆಯನ್ನು ಮುಚ್ಚಿಟ್ಟುಕೊಳ್ಳಲು ಯತ್ನಿಸುತ್ತಾ ಬಂದಿದ್ದಾರೆ. ಇಂದಿರಾ ಎಮರ್ಜೆನ್ಸಿ ರಾಜಕೀಯ ವಲಯಕ್ಕೆ ಸೀಮಿತವಾಗಿದ್ದರೆ ಮೋದಿ ಎಮರ್ಜೆನ್ಸಿ ದೇಶದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಮಾತ್ರವಲ್ಲದೆ ಜನರ ದೈನಂದಿನ ಬದುಕಿನ ಎಲ್ಲಾ ಆಯಾಮಗಳನ್ನು ಅತಂತ್ರಗೊಳಿಸಿದೆ.ಇಂದಿರಾ ಎಮರ್ಜೆನ್ಸಿ ಕೇವಲ 20 ತಿಂಗಳುಗಳು ಇದ್ದರೆ ಮೋದಿ ಸರ್ವಾಧಿಕಾರ ಹನ್ನೊಂದು ವರ್ಷ ದಾಟಿದೆ. ಸಮಾಜದಲ್ಲಿ, ಸಾಂವಿಧಾನಿಕ ಸಂಸ್ಥೆಗಳಲ್ಲಿ ಬೇರುಬಿಟ್ಟುಕೊಂಡಿದೆ.
ಇಪ್ಪತ್ತು ತಿಂಗಳ ಇಂದಿರಾ ಎಮರ್ಜೆನ್ಸಿಯ ವಿರುದ್ಧ ದೇಶದ ರಾಜಕೀಯದಲ್ಲಿ ಹಾಗೂ ಸಮಾಜದಲ್ಲು ಬಹುಮತದ ಆಕ್ರೋಶ ಹುಟ್ಟಿದ್ದರೆ ಮೋದಿಯ ಫ಼್ಯಾಸಿಸಂ ಗೆ ಆ ರೀತಿಯ ಪ್ರತಿರೋಧ ಇನ್ನೂ ಕಾಣುತ್ತಿಲ್ಲ ಎಂಬುದು ಹನ್ನೊಂದು ವರ್ಷಗಳ ಚುನಾವಣೆಯ ಫಲಿತಾಂಶಗಳೂ ಹೇಳುತ್ತಿವೆ.
ಪ್ರತಿವರ್ಷದಂತೆ ಈ ವರ್ಷವೂ ಈ ಸಂದರ್ಭವನ್ನು ಹೇಗೆ ಕಾಂಗ್ರೆಸ್ ಪ್ರಜಾಪ್ರಭುತ್ವ ವಿರೋಧಿಯೆಂದು ಮಾತ್ರವಲ್ಲದೆ ತಮ್ಮ ಪಕ್ಷ ಮಾತ್ರ ಎಮರ್ಜೆನ್ಸಿಯಲ್ಲಿ ಸರ್ವಾಧಿಕಾರಿ ವಿರೋಧಿಯಾಗಿತ್ತೆಂಬ ಸುಳ್ಳನ್ನು ವ್ಯವಸ್ಥಿತವಾಗಿ ಹಂಚಲು ಸಂಘಪರಿವಾರ ಮತ್ತು ಬಳಸಿಕೊಳ್ಳುತ್ತದೆ.
ಘನಘೋರ ತುರ್ತುಸ್ಥಿತಿಯನ್ನು ಬೆಂಬಲಿಸಿತ್ತೇಕೆ ಸಂಘಪರಿವಾರ?
ಇತಿಹಾಸವನ್ನು ನೋಡಿದರೆ , ಸಂಘಪರಿವಾರ ಮತ್ತು ಅಂದಿನ ಜನಸಂಘ ಇತರ ಜನತಾಂತ್ರಿಕ ಶಕ್ತಿಗಳಷ್ಟು ಕಟಿಬದ್ಧತೆಯಿಂದ ಮತ್ತು ತ್ಯಾಗಶೀಲತೆಯಿಂದ ತುರ್ತುಸ್ಥಿತಿಯ ವಿರುದ್ಧ ಹೋರಾಡದೆ, ಇಂದಿರಾಗಾಂಧಿಯವರೊಂದಿಗೆ ರಾಜಿ-ಕಾಬೂಲಿಯಲ್ಲಿ ತೊಡಗಿದ್ದರೆಂಬ ಸಂಗತಿಯನ್ನು ಮುಚ್ಚಿಟ್ಟಿರುವುದು ಸ್ಪಷ್ಟವಾಗುತ್ತದೆ. ಅಷ್ಟು ಮಾತ್ರವಲ್ಲ ಅವರ ಪಿತಾಮಹ ಸಾವರ್ಕರ್ ರೀತಿಯಲ್ಲಿ ಅವರ ನಾಯಕರು ಜೈಲಿನಿಂದಲೇ ತುರ್ತುಸ್ಥಿತಿಯನ್ನು ಬೆಂಬಲಿಸುತ್ತಾ ಶರಣಾಗತಿ ಪತ್ರಗಳನ್ನು ಬರೆದಿದ್ದರು.
ಇತಿಹಾಸದ ಈ ಅತ್ಯಂತ ಅಪಮಾನಕಾರಿ ಪುಟಗಳನ್ನು ಹಾಗೂ ತಮ್ಮ ಈ ಅವಕಾಶವಾದಿ ಜನದ್ರೋಹಿ ಧೋರಣೆಗಳನ್ನು ಬಿಜೆಪಿ-ಸಂಘಪರಿವಾರ ಮುಚ್ಚಿಹಾಕಲು ಸತತವಾಗಿ ಪ್ರಯತ್ನಿಸುತ್ತಲೇ ಇದೆ. ಆದರೆ ಆ ಕಾಲದ ಅವರ ಬರಹಗಳು ಮತ್ತು ಅವರ ನಾಯಕರುಗಳೆ ದಾಖಲಿಸಿರುವ ಇತಿಹಾಸಗಳು ಹೇಗೆ ಸಂಘಪರಿವಾರದ ನಾಯಕರು ಎಮರ್ಜೆನ್ಸಿಯನ್ನು ಗುಪ್ತವಾಗಿ ಬೆಂಬಲಿಸಿದ್ದರು ಎಂಬ ಬಗ್ಗೆ ಸಾಕಷ್ಟು ಪುರಾವೆಗಳನ್ನು ಒದಗಿಸುತ್ತವೆ.
ಅಟಲ ಬಿಹಾರಿಯವರು ಅರೆಕ್ಷಣವೂ ಜೈಲಿನಲ್ಲಿರಲಿಲ್ಲ!
ಪ್ರತಿವರ್ಷ ಜೂನ್ 25 ರಂದು ಬಿಜೆಪಿ ಮತ್ತು ಆರೆಸ್ಸೆಸ್ ನವರು ಯಥಾಪ್ರಕಾರ ತಾವು ಹೇಗೆ ಭಾರತವನ್ನು ತುರ್ತುಸ್ಥಿತಿಯಿಂದ ಕಾಪಾಡಿದೆವು ಎಂದು ಕೊಚ್ಚಿಕೊಳ್ಳುತ್ತಾ ವಾಜಪೇಯಿ, ಮೊರಾರ್ಜಿ ಹಾಗೂ ಇನ್ನಿತರ ನಾಯಕರ ಬಂಧನದ ಬಗ್ಗೆ ವರದಿ ಮಾಡಿದ್ದ 1977ರ ಜೂನ್ 26 ರ ಪತ್ರಿಕೆಗಳ ಮುಖಪುಟವನ್ನು ಪೇಸ್ಬುಕ್ನಲ್ಲಿ ಹಾಕಿಕೊಳ್ಳುತ್ತಾರೆ.
ಆದರೆ ಬಿಜೆಪಿ ನಾಯಕರುಗಳಿಗಿಂತ ಹೆಚ್ಚಿನ ಸಾವು ನೋವುಗಳನ್ನು ಎಮರ್ಜೆನ್ಸಿಯಲ್ಲಿ ಅನುಭವಿಸಿದವರು ಸಮಾಜವಾದಿಗಳು, ಲೋಹಿಯಾವಾದಿಗಳು, ಸಿಪಿಎಂ ಮತ್ತು ನಕ್ಸಲೈಟ್ ಪಕ್ಷಗಳ ಸಾವಿರಾರು ನಾಯಕರು ಮತ್ತು ಕಾರ್ಯಕರ್ತರು. ಅದು ಅಂದಿನ ಗೃಹ ಇಲಾಖೆಯ ಕಡತಗಳನ್ನು ಹಾಗೂ ಗುಪ್ತ ವರದಿಗಳನ್ನೂ ಗಮನಿಸಿದರೆ ಗೊತ್ತಾಗುತ್ತದೆ. ಅದಿರಲಿ. ಮುಖಪುಟದಲ್ಲಿ ಹೆಸರು ಹಾಕಿಸಿಕೊಂಡ ಅಟಲ್ ಬಿಹಾರಿ ವಾಜಪೇಯಿಯವರು ನಿಜಕ್ಕೂ ತುರ್ತುಸ್ಥಿತಿಯಲ್ಲಿ ಜೈಲುವಾಸ ಅನುಭವಿಸಿದ್ದರೇ? ಖಂಡಿತಾ ಇಲ್ಲ.
ತುರ್ತುಸ್ಥಿತಿಯ 20 ತಿಂಗಳುಗಳಲ್ಲಿ ಅತಿ ಹೆಚ್ಚು ಭಾಗ ಅಟಲ್ ಬಿಹಾರಿ ವಾಜಪೇಯಿಯವರು ಪೆರೋಲ್ ಮೇಲೆ ಮನೆಯಲ್ಲಿ ಕಳೆದಿದ್ದರು. ಹಾಗೂ ಪೆರೋಲ್ ಪಡೆದುಕೊಳ್ಳಲು ತುರ್ತುಸ್ಥಿತಿಯನ್ನು ತಾವು ವಿರೋಧಿಸುವುದಿಲ್ಲ ಎಂದು ಮುಚ್ಚಳಿಕೆಯನ್ನೂ ಬರೆದುಕೊಟ್ಟಿದ್ದರು! ಇದನ್ನು ದಾಖಲೆ ಸಮೇತ ಜನರ ಗಮನಕ್ಕೆ ತಂದಿದ್ದು ಕಮ್ಯುನಿಷ್ಟರೂ ಅಲ್ಲ, ಸಮಾಜವಾದಿಗಳೂ ಅಲ್ಲ. ಬದಲಿಗೆ ಬಿಜೆಪಿ ಪಕ್ಷದ ಪ್ರಮುಖ ನಾಯಕರಲ್ಲೊಬ್ಬರಾದ ಸುಬ್ರಹ್ಮಣ್ಯ ಸ್ವಾಮಿಯವರು. 2000 ನೇ ಇಸವಿಯ ಜೂನ್ 13 ರಂದು The Hindu ಪತ್ರಿಕೆಗೆ ಬರೆದ “The Unlearnt Lessons Of Emergency” ಎಂಬ ಸುದೀರ್ಘ ಲೇಖನದಲ್ಲಿ ಸುಬ್ರಹ್ಮಣ್ಯ ಸ್ವಾಮಿಯವರು ಹೇಗೆ ಆರೆಸ್ಸೆಸ್ ಮತ್ತು ಜನಸಂಘದ ಹಲವಾರು ನಾಯಕರು ಇಂದಿರಾಗಾಂಧಿಯವರ ಜೊತೆಗೆ ಗುಪ್ತ ಮಾತುಕತೆಗಳಲ್ಲಿ ತೊಡಗಿದ್ದರು ಎಂಬುದನ್ನು ಬಯಲಿಗೆಳೆಯುತ್ತಾರೆ.
ಅದರಲ್ಲೂ ಅಟಲ್ ಬಿಹಾರಿ ವಾಜಪೇಯಿಯವರು ಬಂಧನಕ್ಕೊಳಗಾದ ಕೆಲವೇ ದಿನಗಳಲ್ಲಿ ಇಂದಿರಾಗಾಂಧಿಯವರ ಜೊತೆ ಒಂದು ಒಪ್ಪಂದಕ್ಕೆ ಬರುತ್ತಾರೆ. ತಮಗೆ ಪೆರೋಲ್ ನೀಡಿ ಹೊರಬರಲು ಅವಕಾಶ ನೀಡಿದರೆ ತಾವು ಸರ್ಕಾರಿ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲವೆಂದು ಮುಚ್ಚಳಿಕೆ ಬರೆದುಕೊಟು ಹೊರಬರುತ್ತಾರೆ. ಹಾಗೆಯೇ ಹೊರಗಿದ್ದ ಅಷ್ಟೂ ಅವಧಿಯಲ್ಲಿ ಸರ್ಕಾರ ಹೇಳಿದಂತೆ ನಡೆದುಕೊಳ್ಳುತ್ತಾರೆ ಎಂದು ಅವರು ದಾಖಲಿಸಿದ್ದಾರೆ.
ಇದು ಆಶ್ಚರ್ಯವೂ ಅಲ್ಲ. ಹೊಸತೂ ಅಲ್ಲ. ಏಕೆಂದರೆ, ವಾಜಪೇಯಿಯವರು ಸ್ವಾತಂತ್ರ್ಯ ಪೂರ್ವದಲ್ಲಿ ಸಹ ಹೀಗೆ ಮಾಡಿದ್ದರು. 1942 ರ ಕ್ವಿಟ್ ಇಂಡಿಯಾ ಚಳವಳಿಯ ಪ್ರದರ್ಶನವೊಂದನ್ನು ನೋಡುತ್ತಿದ್ದಾಗ ಬ್ರಿಟಿಷ್ ಸರ್ಕಾರದಿಂದ ಬಂಧಿಸಲ್ಪಟ್ಟ ವಾಜಪೇಯಿಯವರು, ಆಗಲೂ ಬಂಧನದಿಂದ ಹೊರಬಂದದ್ದು ತಮ್ಮ ಪರಿಚಿತ ಚಳವಳಿಗಾರರ ಹೆಸರನ್ನು ಬಿಟ್ಟುಕೊಟ್ಟು ಮತ್ತು ಇನ್ನೆಂದಿಗೂ ಬ್ರಿಟಿಷ್ ಸರ್ಕಾರದ ವಿರೋಧಿ ಚಳವಳಿಯಲ್ಲಿ ಭಾಗವಹಿಸುವುದಿಲ್ಲ ಎಂದು ಬರೆದುಕೊಟ್ಟೇ ಅಲ್ಲವೇ?
ಇಂದಿರಾ ಗಾಂಧಿಗೆ ಶರಣಾದ ಆರೆಸ್ಸೆಸ್ಸಿನ Surrender Document
ಅದೇ ಲೇಖನದಲ್ಲಿ ಸುಬ್ರಹ್ಮಣ್ಯ ಸ್ವಾಮಿಯವರು ಹೇಗೆ ಆರೆಸ್ಸೆಸ್ಸಿನ ನಾಯಕರು 1976 ರ ಡಿಸೆಂಬರ್ ಹೊತ್ತಿಗೆ ಇಂದಿರಾಗಾಂಧಿಯವರ ಎಮರ್ಜೆನ್ಸಿಗೆ ಸಂಪೂರ್ಣ ಹಾಗೂ ಬಹಿರಂಗ ಬೆಂಬಲ ಘೋಷಿಸುವ ಸರೆಂಡರ್ ಡಾಕ್ಯುಮೆಂಟ್ ಗೆ ಸಹಿಹಾಕಲು ತೀರ್ಮಾನ ತೆಗೆದುಕೊಂಡಿದ್ದರೂ ಎಂಬುದನ್ನು ವಿವರಿಸುತ್ತಾರೆ. ವಾಸ್ತವವಾಗಿ ತುರ್ತುಸ್ಥಿತಿಯ ಘೋಷಣೆಯಾದ ನಂತರ ಸರ್ಕಾರಕ್ಕೆ ವಿರೋಧ ಮಾಡದಂತೆ ಸಂಘಟನಾತ್ಮಕ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿಯನ್ನು ಆರೆಸ್ಸೆಸ್ಸಿನ ಹಿರಿಯ ನಾಯಕರಾದ ಮಧುಕರ್ ಮೂಳೆಯವರಿಗೆ ವಹಿಸಲಾಗಿತ್ತು. ಸರ್ಕಾರದೊಡನೆ ಸಂಧಾನ ಮಾತುಕತೆಯ ಜವಾಬ್ದಾರಿಯನ್ನು ರಾನಡೆಯವರಿಗೆ ವಹಿಸಲಾಗಿತ್ತು. ಸುಬ್ರಹ್ಮಣ್ಯಸ್ವಾಮಿಯವರಿಗೆ ಅಮೆರಿಕವನ್ನೂ ಒಳಗೊಂಡಂತೆ ವಿದೇಶಗಳಲ್ಲಿ ಎಮರ್ಜೆನ್ಸಿ ವಿರೋಧಿ ಹೋರಾಟದ ಬಗ್ಗೆ ಸರ್ಕಾರಗಳ ಬೆಂಬಲ ಪಡೆದುಕೊಳ್ಳುವ ಜವಾಬ್ದಾರಿಯನ್ನು ವಹಿಸಲಾಗಿತ್ತು.
ಆದರೆ 1976 ರ ನವಂಬರ್ನಲ್ಲಿ ಮಧುಕರ್ ಮೂಳೆಯವರು ಸುಬ್ರಹ್ಮಣ್ಯ ಸ್ವಾಮಿಯವರಿಗೆ ತಮ್ಮ ಪ್ರಯತ್ನಗಳನ್ನು ನಿಲ್ಲಿಸಲು ಅತ್ಯಂತ ವಿಷಾದದಿಂದ ಸಲಹೆ ಮಾಡುತ್ತಾರೆ. ಏಕೆಂದರೆ: “the RSS had finalised the document of surrender to be signed at the end of January 1977” -ಆರೆಸ್ಸೆಸ್ಸು 1977 ರ ಜನವರಿಯ ಕೊನೆಯ ವೇಳೆಗೆ ಶರಣಾಗತಿ ಒಪ್ಪಂದಕ್ಕೆ ಸಹಿ ಹಾಕಲು ತೀರ್ಮಾನಿಸಿದೆ- ಎಂದು ಮಧುಕರ್ ಮೂಳೆಯವರು ವಿಷಾದದಿಂದ ನನಗೆ ತಿಳಿಸಿದರು ಎಂದು ಸುಬ್ರಹ್ಮಣ್ಯಸ್ವಾಮಿಯವರು ಆ ಲೇಖನದಲ್ಲಿ ದಾಖಲಿಸುತ್ತಾರೆ.
ಹೆಚ್ಚಿನ ವಿವರಗಳಿಗೆ ಆಸಕ್ತರು ಸುಬ್ರಹ್ಮಣ್ಯಸ್ವಾಮಿಯವರ ಲೇಖನವನ್ನು ಈ ವೆಬ್ ವಿಳಾಸದಲ್ಲಿ ಓದಬಹುದು:
ಆರೆಸ್ಸೆಸ್ ನಾಯಕರ ಈ ಸರೆಂಡರ್ ತೀರ್ಮಾನದ ಬಗ್ಗೆ ಆ ದಿನಗಳಲ್ಲಿ ಐಬಿಯ ಮುಖ್ಯಸ್ಥರಾಗಿದ್ದ ಟಿ.ವಿ. ರಾಜೇಶ್ವರ್ ಅವರು ತಮ್ಮ “India- Crucial Years” ಪುಸ್ತಕದಲ್ಲೂ ದಾಖಲಿಸಿದ್ದಾರೆ. ಹಾಗೆಯೇ ಈ ವಿದ್ಯಮಾನವನ್ನು ಆ ದಿನಗಳಲ್ಲಿ ಇಂದಿರಾಗಾಂಧಿಯವರ ವಾರ್ತಾಧಿಕಾರಿಯಾಗಿದ್ದ ಹಿರಿಯ ಪತ್ರಕರ್ತ ಎಚ್.ವೈ. ಶಾರದಾಪ್ರಸಾದರ್ ಅವರೂ ದಾಖಲಿಸಿರುವುದನ್ನು ಅವರ ಮಗ ರವಿ ವಿಶ್ವೇಶ್ವರ ಶಾರದಾ ಪ್ರಸಾದ್ ಅವರು ದಿ ಪ್ರಿಂಟ್ ವೆಬ್ ಪತ್ರಿಕೆಗೆ ಬರೆದ ಲೇಖದಲ್ಲಿ ನೆನಪಿಸಿದ್ದಾರೆ. (https://theprint.in/…/rss-leaders-deserted…/448294/)
ಸರಸಂಘಚಾಲಕರ ಸರೆಂಡರ್ ಪತ್ರಗಳು
ಇವೆಲ್ಲಕ್ಕಿಂತ ಮುಖ್ಯವಾಗಿ ತುರ್ತುಸ್ಥಿತಿಯಲ್ಲಿ ಬಂಧನಕ್ಕೊಳಗಾಗಿದ್ದ ಆರೆಸ್ಸೆಸ್ನ ಪರಮೋಚ್ಚ ನಾಯಕರಾದ ಸರಸಂಘಚಾಲಕ ಮಧುಕರ್ ದೇವರಸ್ ಅಲಿಯಾಸ್ ಬಾಳಾಸಾಹೆಭ್ ದೇವರಸ್ ಅವರು ಯರವಾಡ ಜೈಲಿನಿಂದ ಇಂದಿರಾಗಾಂಧಿಯವರಿಗೆ ಬರೆದ ಸರೆಂಡರ್ ಪತ್ರಗಳು ಹಾಗೂ ಅದನ್ನು ಪರಿಗಣಿಸಲು ಇಂದಿರಾ ಅವರ ಮೇಲೆ ಪ್ರಭಾವ ಬೀರಬೇಕೆಂದು ವಿನೋಭಾ ಭಾವೆಯವರಿಗೆ ಬರೆದ ಗೋಗೆರೆವ ಪತ್ರಗಳು ತುರ್ತುಸ್ಥಿತಿಯಲ್ಲಿ ಆರೆಸ್ಸೆಸ್ ಮತ್ತು ಜನಸಂಘದ ನಿಜವಾದ ಪಾತ್ರವೇನಿತ್ತು ಎಂದು ತಿಳಿಯಲೂ ಹಾಗು ಅವರ ಸೋಗಲಾಡಿತನವನ್ನೂ ಅರಿಯಲು ಸಹಾಯ ಮಾಡುತ್ತವೆ.
ಬಾಳಾಸಾಹೇಬ್ ದೇವರಸ್ ಅವರು ಹಿಂದಿಯಲ್ಲಿ ಬರೆದ “ಹಿಂದೂ ಸಂಘಟನ್ ಔರ್ ಸತ್ತಾವದಿ ರಾಜನೀತಿ” ಎಂಬ ಪುಸ್ತಕದ ಕೊನೆಯಲ್ಲಿ ಅಪೆಂಡಿಕ್ಸ್ ನ ರೂಪದಲ್ಲಿ ಈ ಎಲ್ಲಾ ಪತ್ರಗಳನ್ನೂ ಸೇರಿಸಲಾಗಿದೆ. ವಿದ್ವಾಂಸ ಹಾಗೂ ರಾಜಕೀಯ ಕಾರ್ಯಕರ್ತರೂ ಆದ ಯೋಗೇಂದ್ರ ಯಾದವ್ ಅವರು ಹಿಂದಿಯಲ್ಲಿರುವ ಆ ಇಡೀ ಪುಸ್ತಕವನ್ನು ತಮ್ಮ ಟ್ವಿಟರಿನಲ್ಲಿಯೂ ಪ್ರಕಟಿಸಿದ್ದಾರೆ. ಆಸಕ್ತರು ಅದನ್ನು ನೇರವಾಗಿ ಈ ವೆಬ್ ವಿಳಾಸದಲ್ಲಿ ಓದಬಹುದು: https://images.app.goo.gl/MXPKDDSwtniZFp1n9
ಈ ಎಲ್ಲಾ ಪತ್ರಗಳ ಇಂಗ್ಲೀಷ್ ಆವೃತ್ತಿಯನ್ನು ಆಗ ಭಾರತೀಯ ಲೋಕದಳದ ನಾಯಕರಾಗಿದ್ದ ಬ್ರಹ್ಮದತ್ ಅವರು ಬರೆದಿರುವ ” Five headed monster: A factual narrative of the genesis of Janata Party”
ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಅದೇ ರೀತಿ ಕಳೆದ ಮೂರು ನಾಲ್ಕು ದಶಕಗಳಿಂದ ಭಾರತದ ರಾಜಕೀಯ ಹಾಗೂ ಸಾಮಾಜಿಕ ಬೆಳವಣಿಗೆಗಳ ಬಗ್ಗೆ ತಳಮಟ್ಟದ ಅಧ್ಯಯನ ಮಾಡಿ ಹಲವಾರು ಮೌಲಿಕ ಗ್ರಂಥಗಳನ್ನು ಬರೆದಿರುವ ಕ್ರಿಸ್ಟೋಫೋ ಜಾಫರ್ಲೆ ಯವರು ಮತ್ತೊಬ ವಿದ್ವಾಂಸ ಪ್ರತಿನಾವ್ ಅನಿಲ್ ಅವರ ಜೊತೆಗೂಡಿ ತುರ್ತುಪರಿಸ್ಥಿತಿಯ ಬಗ್ಗೆ ನಡೆಸಿದ ಹಲವಾರು ವರ್ಷಗಳ ಸಂಶೋಧನೆಯ ನಂತರ 2021 ರಲ್ಲಿ ಪ್ರಕಟಿಸಿರುವ “Indias First Dictatorship- The Emergency-1975-77”
ಎಂಬ ಪುಸ್ತಕದಲ್ಲೂ ಈ ಪತ್ರಗಳ ಇಂಗ್ಲಿಶ್ ಅನುವಾದವಿದೆ. ಆಸಕ್ತರು ಪುಸ್ತಕದ ಆ ಭಾಗವನ್ನು ಈ ವೆಬ್ ವಿಳಾಸದಲ್ಲಿ ಓದಬಹುದು:
ಮೊದಲ ಸರೆಂಡರ್ ಪತ್ರ- 22 ಆಗಸ್ತ್ 1975
1975 ರ ಜೂನ್ 25 ರಂದು ತುರ್ತುಸ್ಥಿತಿಯನ್ನು ಘೋಷಿಸಿದ ನಂತರ 1975 ರ ಆಗಸ್ಟ್ 15 ರಂದು ಇಂದಿರಾಗಂಧಿಯವರು ಕೆಂಪುಕೋಟೆಯಿಂದ ಸ್ವಾತಂತ್ರ್ಯ ದಿನದ ಭಾಷಣವನ್ನು ಮಾಡಿದರು. ಅದರಲ್ಲಿ ಎಲ್ಲಾ ಸರ್ವಾಧಿಕಾರಿಗಳಂತೆ ತಾವು ಕೈಗೊಂಡ ತುರ್ತುಸ್ಥಿತಿ ನಿರ್ಣಯ ಹೇಗೆ ದೇಶದ ಭದ್ರತೆಗೆ ಅತ್ಯಗತ್ಯವಾಗಿದೆಯೆಂದೂ, ಅದನ್ನು ವಿರೋಧಿಸುವವರೂ ದೇಶದ್ರೋಹಿಗಳೆಂದೂ ಭಾಷಣ ಮಾಡಿದರು. ದೇಶಾದ್ಯಂತ ಸಕಲ ಪ್ರಜಾತಂತ್ರವಾದಿಗಳೂ ಈ ಭಾಷಣವನ್ನೂ ಹಾಗೂ ಇಂದಿರಾಗಂಧಿಯವರ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿದರು. ಆದರೆ ಆರೆಸ್ಸೆಸ್ನ ಸರಸಂಘ ಚಾಲಕರಾದ ದೇವರಸ್ ಅವರು ಮಾತ್ರ ಇಂದಿರಾಗಾಂಧಿಯವರಿಗೆ ಬರೆದ 1975 ರ ಆಗಸ್ಟ್ 22 ರಂದು ಬರೆದ ಪ್ರಥಮ ಪತ್ರದಲ್ಲಿ ಆ ಭಾಷಣವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಾರೆ!!
ಅಷ್ಟು ಮಾತ್ರವಲ್ಲ ಅವರ ಭಾಷಣವು ಸಮಯೋಚಿತವೂ ಆಗಿತ್ತು ಹಾಗೂ ಸಮತೋಲದಿಂದಲೂ ಕೂಡಿತ್ತು ಎಂದು ಕೊಂಡಾಡುತ್ತಾರೆ. ಆ ನಂತರ ಇಂದಿರಾ ಸರ್ಕಾರಕ್ಕೆ ಆರೆಸ್ಸೆಸ್ ಬಗ್ಗೆ ಇರುವ ತಪ್ಪು ಅಭಿಪ್ರಾಯವನ್ನು ಹೋಗಲಾಡಿಸಲು ಈ ಪತ್ರ ಬರೆಯುತ್ತಿದ್ದೇನೆಂದು ಹೇಳುತ್ತಾ ಹೇಗೆ ಆರೆಸ್ಸೆಸ್ ಹಿಂದೂಗಳ ಸಂಘಟನೆಯನ್ನು ಮಾಡುತ್ತಿದ್ದರೂ ಯಾವತ್ತಿಗೂ ಇಂದಿರಾ ಸರ್ಕಾರದ ವಿರೋಧಿಯಾಗಿರಲಿಲ್ಲವೆಂಬ ಭರವಸೆಯನ್ನು ಕೊಡುತ್ತಾರೆ. ಹಾಗೂ ಅಂತಿಮವಾಗಿ : ” ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಆರೆಸ್ಸೆಸ್ಸಿನ ಮೇಲಿನ ನಿಷೇಧವನ್ನು ತೆಗೆಯಬೇಕೆಂದು ಪ್ರಾರ್ಥಿಸುತ್ತೇನೆ. ನಿಮಗೆ ಸೂಕ್ತವೆಂದು ಕಂಡುಬಂದಲ್ಲಿ ತಮ್ಮನ್ನು ಖುದ್ದು ಭೇಟಿಯಾಗುವುದು ನನಗೆ ಅತ್ಯಂತ ಸಂತೋಷದ ವಿಷಯವಾಗಿರುತ್ತದೆ.. ಹೀಗೆ ಮೊದಲನೆ ಪತ್ರದಲ್ಲಿ ತುರ್ತುಸ್ಥಿತಿಯ ಬಗ್ಗೆ ಸಮ್ಮತಿಯನ್ನು ವ್ಯಕ್ತಪಡಿಸಿದ್ದು ಮಾತ್ರವಲ್ಲದೆ ಅಂತಿಮವಾಗಿ ಅವರು ವಿನಂತಿಸಿದ್ದು ಆರೆಸ್ಸೆಸ್ಸಿನ ಮೇಲಿನ ನಿಷೇಧವನ್ನು ಕಿತ್ತುಹಾಕಬೇಕೆಂದೇ ವಿನಾ ತುರ್ತುಸ್ಥಿತಿಯನ್ನು ತೆಗೆಯಬೇಕೆಂದಲ್ಲ! ಇದು ಆರೆಸ್ಸೆಸ್ಸ್!
ಎರಡನೇ ಸರೆಂಡರ್ ಪತ್ರ- 1975 ರ ನವಂಬರ್ 10
ಆರೆಸ್ಸೆಸ್ಸಿನ ಸರಸಂಘಚಾಲಕರ ಪತ್ರಕ್ಕೆ ಇಂದಿರಾಗಂಧಿಯವರು ಯಾವುದೇ ಪ್ರತಿಕ್ರಿಯೆ ಕೊಡುವುದಿಲ್ಲ. ಈ ಮಧ್ಯೆ ತುರ್ತುಸ್ಥಿತಿಯಲ್ಲಿ ಇಂದಿರಾಗಾಂಧಿಯವರು ಬಗ್ಗಿರಿ ಎಂದರೆ ತೆವಳಲೂ ಸಿದ್ಧವಾಗಿದ್ದ ಮಾಧ್ಯಮಗಳು ಹಾಗೂ ಸುಪ್ರೀಂಕೋರ್ಟುಗಳು ಇಂದಿರಾಗಾಂಧಿ ಹೇಳಿದಂತೆ ಕೇಳುತ್ತಿದ್ದವು. ಆದ್ದರಿಂದಲೇ ಇಂದಿರಾಗಾಂಧಿಯವರ ಚುನಾವಣಾ ಆಯ್ಕೆಯನ್ನು ಅಸಿಂಧುಗೊಳಿಸಿದ್ದ ಅಲಹಾಬಾದಿನ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟಿನ ಐದುನ್ಯಾಯಾಧೀಶರ ಪೀಠ ಅನೂರ್ಜಿತಗೊಳಿಸಿ ಇಂದಿರಾಗಾಂಧಿಯವರ ಆಯ್ಕೆಯನ್ನು ಎತ್ತಿಹಿಡಿಯಿತು. ಸ್ವತಂತ್ರ ನ್ಯಾಯಾಂಗದ ಈ ದುಸ್ಥಿತಿಯು ಸರ್ವಾಧಿಕಾರದ ಮುಂದುವರೆಕೆಯೆಂದು ಜೈಲಿನಲ್ಲಿ ಹಾಗೂ ಬಯಲಿನಲ್ಲಿ ಇದ್ದ ಎಲ್ಲಾ ಪ್ರಜಾತಂತ್ರವಾದಿಗಳು ಒಕ್ಕೊರಲಿನಿಂದ ಖಂಡಿಸಿದರು. ಆದರೆ ಸರಸಂಘಚಾಲಕರು ಮಾಡಿದ್ದೇನು? 1975 ರ ನವಂಬರ್ 10 ರಂದು ಇಂದಿರಾಗಾಂಧಿಯವರನ್ನುದ್ದೇಶಿಸಿ ಎರಡನೇ ಪತ್ರವನ್ನು ಬರೆಯುವ ದೇವರಸ್ ಅವರು ಪತ್ರವನ್ನು ಪ್ರಾರಂಭಿಸುವುದೇ ಸುಪ್ರೀಂಕೋರ್ಟು ಅವರ ಪರವಾಗಿ ಕೊಟ್ಟ ಆದೇಶಕ್ಕೆ ಅಭಿನಂದನೆ ಸಲ್ಲಿಸುವ ಮೂಲಕ! ” Let me congratulate you as five judges of the Supreme Court have declared the validity of your election.” (ನಿಮ್ಮ ಚುನಾವಣೆಯನ್ನು ಸಿಂಧು ಎಂದು ಘೋಷಿಸಿದ ಸುಪ್ರೀಂಕೋರ್ಟಿನ ಐದು ಸದಸ್ಯರ ಪೀಠದ ಆದೇಶಕ್ಕೆ ಮೊದಲಿಗೆ ಅಭಿನಂದನೆಗಳು)
ಆ ನಂತರ ಮತ್ತೊಮ್ಮೆ ಆ ಪತ್ರದುದ್ದಕ್ಕೂ ಹೇಗೆ ಆರೆಸ್ಸೆಸ್ ಸರ್ಕಾರದ ಹಾಗೂ ತುರ್ತುಸ್ಥಿತಿಯ ವಿರೋಧಿಯಲ್ಲ ಎಂದು ಮನವರಿಕೆ ಮಾಡಿಕೊಡಲು ಯತ್ನಿಸುವ ದೇವರಸ್ ಅವರು ಕೊನೆಗೆ ಹೇಳುವುದೇನೆಂದರೆ:
ಆರೆಸ್ಸೆಸ್ಸಿನ ಮೇಲಿನ ನಿಷೇಧವನ್ನು ಹಿತೆಗೆದುಕೊಂಡಲ್ಲಿ: ” ಲಕ್ಷಾಂತರ ಆರೆಸ್ಸೆಸ್ ಸ್ವಯಂಸೇವಕರ ನಿಸ್ವಾರ್ಥ ಕಾರ್ಯಶಕ್ತಿಯನ್ನು ಸರ್ಕಾರದ ದೇಶಾಭಿವೃದ್ಧಿ ಕೆಲಸಕ್ಕೆ ಬಳಸಬಹುದು” ಆರ್ಥಾತ್ ಆರೆಸ್ಸೆಸ್ಸಿನ ಮೇಲೆ ನಿಷೇಧವನ್ನು ತೆಗೆದುಹಾಕಿದರೆ ಆರೆಸ್ಸೆಸ್ಸಿನ ಕಾರ್ಯಕರ್ತರು ಇಂದಿರಾಗಾಂಧಿಯವರ ಸರ್ವಾಧಿಕಾರಿ ಸರ್ಕಾರದ ಜೊತೆಗೂಡಿ ಕೆಲಸ ಮಾಡುವುದಾಗಿ ಖುಲ್ಲಂಖುಲ್ಲಾ ಆಶ್ವಾಸನೆಯನ್ನು ಸರಸಂಘಚಾಲಕರು ನೀಡುತ್ತಾರೆ.
ಮೂರನೇ ಸರೆಂಡರ್ ಪತ್ರ- 1976 ರ ಫೆಬ್ರವರಿ 24
ಆದರೆ ಇಂದಿರಾ ಸರ್ಕಾರ ಅದನ್ನೂ ಪರಿಗಣಿಸುವುದಿಲ್ಲ. ಆಗ ಇಂದಿರಾಗಾಂಧಿಯವರ ಮೇಲೆ ಪ್ರಭಾವವಿದ್ದ ಹಾಗೂ ಆರೆಸ್ಸೆಸ್ಸಿನ ಸೈದ್ಧಾಂತಿಕ ಮಿತ್ರರೂ ಆಗಿದ್ದ ವಿನೋಭಾ ಭಾವೆಯವರ ಮಧ್ಯಸ್ಥಿಕೆಯನ್ನು ಗೋಗೆರೆಯುತ್ತಾ ಸರಸಂಘಚಾಲಕರು ಮತ್ತೊಂದು ಪತ್ರ ಬರೆಯುತ್ತಾರೆ. ಏಕೆಂದರೆ ಫೆಬ್ರವರಿಯ ಕೊನೆಯ ವೇಳೆಗೆ ಇಂದಿರಾಗಾಂಧಿಯವರು ಭಾವೆಯವರ ಆಶ್ರಮಕ್ಕೆ ಭೇಟಿ ನೀಡುವ ಕಾರ್ಯಕ್ರಮವಿರುತ್ತದೆ. ಹೀಗಾಗಿ ದೇವರಸ್ ಅವರು ಆ ಭೇಟಿಯಲ್ಲಿ ಆರೆಸ್ಸೆಸ್ ನ ಪರವಾಗಿ ಆರೆಸ್ಸೆಸ್ ಮೇಲಿನ ನಿಷೇಧವನ್ನಿ ತೆಗೆದುಹಾಕಲು ಪ್ರಭಾವ ಬೆರಬೇಕೆಂದು ಗೋಗೆರೆಯುತ್ತಾರೆ. ಹಾಗೂ ಆರೆಸ್ಸೆಸ್ಸಿನ ಮೇಲಿನ ನಿಷೇಧವನ್ನು ತೆಗೆದುಹಾಕಿದಲ್ಲಿ a condition will prevail as to enable the volunteers of the Sangh to participate in the planned programme of action relating to country’s progress and prosperity under the leadership of the prime minister.” ಅಂದರೆ -ಪ್ರಧಾನಿ ಇಂದಿರಾಗಾಂಧಿ ಅವರ ನೇತೃತ್ವದಲ್ಲಿ ಯೋಜಿತವಾದ ದೇಶದ ಅಭಿವೃದ್ಧಿ ಮತ್ತು ಪ್ರಗತಿಯನ್ನು ಸಾಧಿಸುವ ಕಾರ್ಯಕ್ರಮಗಳಲ್ಲಿ ಸಂಘದ ಕಾರ್ಯಕರ್ತರೂ ಭಾಗವಹಿಸಬಹುದು ಎಂದು ಮುಕ್ತವಾಗಿ ಇಂದಿರಾಗಾಂಧಿಯವರ ಸರ್ವಾಧಿಕಾರೇ ಸರ್ಕಾರದ ಜೊತೆ ಕೈಗೂಡಿಸುವ ಇರಾದೆಯನ್ನು ಮತ್ತೊಮ್ಮೆ ಪ್ರಕಟಿಸುತ್ತಾರೆ.
ಇದು ತುರ್ತುಪರಿಸ್ಥಿತಿಯಲ್ಲಿ ಆರೆಸ್ಸೆಸ್ಸಿನ ನಾಯಕರ ನಿಜವಾದ ರೂಪ. ಇಡೀ ದೇಶದಲ್ಲಿ ಇಂದಿರಾಗಾಂಧಿಯವರು ಯೋಜಿತವಾಗಿ ಹಕ್ಕುಗಳ ದಮನವನ್ನು ನಡೆಸುತ್ತಿದ್ದಾಗ, ಪ್ರಜಾತಂತ್ರದ ಕಗ್ಗೊಲೆ ನಡೆಯುತ್ತಿದ್ದಾಗ ಆರೆಸ್ಸೆಸ್ ಮತ್ತು ಜನಸಂಘ ಹಿಂಬಾಗಿಲ ಮೂಲಕ ಆ ದಮನಕಾಂಡಕ್ಕೆ ಜೊತೆಯಾಗುವ ಆಶ್ವಾಸನೆ ಕೊಟ್ಟು ಹೊರಬರುವ ಯತ್ನದಲ್ಲಿತ್ತು. ಇದರ ಮುಂದುವರೆಕೆಯಾಗಿಯೇ ಉತ್ತರಪ್ರದೇಶದ ಜನಸಂಘವು ತುರ್ತುಸ್ಥಿತಿಯ ಮೊದಲನೇ ವಾರ್ಷಿಕೋತ್ಸವದ ದಿನವಾದ 1976 ರ ಜೂನ್ 25 ರಂದು ಇಂದಿರಾ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ಘೋಷಿಸಿದ್ದು ಮಾತ್ರವಲ್ಲದೆ ಯಾವುದೇ ಸರ್ಕಾರ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲವೆಂದು ಪ್ರತಿಜ್ನೆ ತೊಟ್ಟರು. ಅಷ್ಟು ಮಾತ್ರವಲ್ಲ, ಉತ್ತರಪ್ರದೇಶ ಹಾಗೂ ಮಧ್ಯಪ್ರದೇಶದ 34 ಜನಸಂಘದ ನಾಯಕರು ಇಂದಿರಾಗಾಂಧಿ ಕಾಂಗ್ರೆಸ್ಸನ್ನು ಸೇರಿಕೊಂಡರು. ಇದೆಲ್ಲದರ ಕ್ಲೈಮಾಕ್ಸೇ 1977 ರ ಜವರಿ ಕೊನೆಯ ವೇಳೆಗೆ ಇಂದಿರಾ ಸರ್ಕಾರದ ಜೊತೆ ಒಪ್ಪಂದಕ್ಕೆ ಬಂದು ಆರೆಸ್ಸೆಸ್ ಸಹಿ ಹಾಕಲು ಸಿದ್ಧವಾಗಿದ್ದ ಸರೆಂಡರ್ ಡಾಕ್ಯುಮೆಂಟ್.
ಅದಕ್ಕೆ ಮುಂಚೆಯೇ ಇಂದಿರಾಗಾಂಧಿಯವರು ತುರ್ತುಸ್ಥಿತಿಯನ್ನು ಹಿಂತೆಗೆದುಕೊಂಡಿದ್ದರಿಂದ ಆ ಸರೆಂಡರ್ ದಸ್ತಾವೇಜಿಗೆ ಸಹಿಹಾಕುವ ಅಗತ್ಯ ಆರೆಸ್ಸೆಸ್ಸಿಗೆ ಬೀಳಲಿಲ್ಲ. ಅಷ್ಟೆ.
ಅ ನಂತರವೂ ಬಾಳಾಸಾಹೇಬ್ ದೇವರಸ್ ಅವರಿಗೆ ಇಂದಿರಾಗಾಂಧಿಯವರು ಅಚ್ಚುಮೆಚ್ಚಿನ ನಾಯಕರಾಗಿದ್ದರು. 1980 ರಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಇಂದಿರಾಗಾಂಧಿಯವರು ತಮ್ಮ್ ಹಿಂದಿನ “ಸಮಾಜವಾದಿ-ಸೆಕ್ಯುಲಾರ್” ನೀತಿಗಳಿಗೆಲ್ಲಾ ತೊರೆದಿದ್ದರು. ಕಾಶ್ಮೀರ ಮತ್ತು ಪಂಜಾಬಿನಲ್ಲಿ “ಹಿಂದು ಅಪಾಯದಲ್ಲಿದ್ದಾನೆ, ಹಿಂದೂ ಅಪಾಯದಲ್ಲಿದ್ದಾನೆ ಎಂದರೆ ದೇಶ ಅಪಾಯದಲ್ಲಿದೆ ಹೀಗಾಗಿ ದೇಶವನ್ನು ರಕ್ಷಿಸಲು ಬಲಿಷ್ಟ ನಾಯಕತ್ವದ ಅಗತ್ಯವಿದೆ” ಎಂಬ ಅಪಾಯಕಾರಿ ಹಿಂದೂತ್ವ ರಾಜಕೀಯವನ್ನು ಪ್ರರಂಭಿಸಿದ ಇಂದಿರಾ ಗಾಂಧಿಯವರನ್ನು ಸರಸಂಘಚಾಲಕ ಬಹಿರಂಗವಾಗಿ ಕೊಂಡಾಡಲು ಪ್ರಾರಂಭಿಸಿದರು. ಆರೆಸ್ಸೆಸ್ಸಿನ ಅಜೆಂಡಾಗಳನ್ನು ಇಂದಿರಾ ಅವರೇ ಜಾರಿ ಮಾಡುತ್ತಿರುವಾಗ ತಮಗೆ ಬಿಜೆಪಿ ಅನಿವಾರ್ಯವಲ್ಲ ಎಂಬ ಘೋಷಣೆಯನ್ನು ಮಾಡಿದರು. ಇಂದಿರಾ ಗಾಂಧಿಯವರ ಹತ್ಯೆಯಾದ ನಂತರ ನಡೆದ ಸಿಖ್ ಹತ್ಯಾಕಾಂಡದಲ್ಲಿ ತಾನೂ ಭಾಗವಹಿಸಿ ಆರೆಸ್ಸೆಸ್ ಋಣ ಸಂದಾಯ ಮಾಡಿತು. ಇದು ಆರೆಸ್ಸೆಸ್. ಇದು ಬಿಜೆಪಿ. ಇದು ಇವರ ಪ್ರಜಾತಂತ್ರ ಪ್ರೇಮ!
ಈ ಬಾರಿ ತುರ್ತುಸ್ಥಿತಿಯನ್ನು ನೆನೆಯುವಾಗ ಈ ಐತಿಹಾಸಿಕ ದ್ರೋಹ, ನಯವಂಚನೆ, ಬಿಜೆಪಿ-ಕಾಂಗ್ರೆಸ್ ಕವಲುಗಳ ಸೀಮಿತ ಭಿನ್ನತೆ..ಇತ್ಯಾದಿಗಳನ್ನು ಮರೆಯದೆ ನೆನೆಪಿಸಿಕೊಳ್ಳೋಣ. ಮತ್ತು ಅದರಿಂದ ಪಾಠ ಕಲಿತು ಇಂದಿನ ಮೋದಿ 3.0 ಸರ್ವಾಧಿಕಾರದ ವಿರುದ್ಧ ನೈಜ ಹೋರಾಟ ಪ್ರಾರಂಭಿಸೋಣ…
- ಶಿವಸುಂದರ್
ಜನಪರ ಚಿಂತಕರು, ಲೇಖಕರು…


Leave a reply