ಕೆಂಪುಕೋಟೆಯಿಂದ ಸತತವಾಗಿ 12 ನೇ ಸ್ವಾತಂತ್ರ್ಯ ದಿನದ ಭಾಷಣವನ್ನು ಮಾಡಿದ ಪ್ರಧಾನಿ ನರೇಂದ್ರ ಮೋದಿಯವರು ಈ ಬಾರಿ ಈವರೆಗೆ ತಾವೂ ಹಾಗೂ ತಮ್ಮ ಹಿಂದಿನ ಯಾವ ಪ್ರಧಾನಿಗಳು ಮಾಡದಿದ್ದ ಮಹಾ ಪ್ರಮಾದವೊಂದನ್ನು ಮಾಡಿದರು. ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿಯವರು RSS-ರಾಷ್ಟ್ರೀಯ ಸ್ವಯಂಸೇವಕ ಸಂಘವು ಹುಟ್ಟಿ ಈ ವರ್ಷ 100 ವರ್ಷವಾಗುತ್ತಿರುವುದನ್ನು ಗರ್ವದಿಂದ ನೆನೆಪಿಸಿಕೊಂಡು ಆ ಸಂಘಟನೆಯು ಭಾರತದ ಸ್ವಾತಂತ್ರ್ಯಕ್ಕೆ ಹಾಗೂ ರಾಷ್ರ ನಿರ್ಮಾಣಕ್ಕೆ ಅಪಾರ ಕೊಡುಗೆಗಳನ್ನು ಕೊಟ್ಟಿದೆ ಎಂಬ ಹಸಿಸುಳ್ಳನ್ನು ರಾಷ್ಟ್ರಕ್ಕೆ ಹೇಳಿದರು. ತಮ್ಮ ಐತಿಹಾಸಿಕ 103 ನಿಮಿಶದ ಭಾಶಣದಲ್ಲಿ ಆರೆಸ್ಸೆಸ್ಸಿನ ಮತ್ತೊಂದು ಅಜೆಂಡಾ ಆಗಿರುವ ಅಕ್ರಮ ವಲಸಿಗರ ಹುಸಿ ಆತಂಕದ ಪ್ರಶ್ನೆಯನ್ನು ರಾಷ್ಟ್ರೀಯ ಸಮಸ್ಯೆ ಎಂಬಂತೆ ದೇಶದ ಮುಂದಿಟ್ಟರು. ಈ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಯಾವ ಪಾತ್ರವನ್ನು ವಹಿಸದ, ಬದಲಿಗೆ ಬ್ರಿಟಿಶರ ಜೊತೆ ಕೈಗೂಡಿಸಿ ಸ್ವಾತಂತ್ರ್ಯ ಹೋರಾಟಕ್ಕೆ ದ್ರೋಹ ಬಗೆದ, ಸ್ವಾತಂತ್ರ್ಯಾ ನಂತರದ ಈ 79 ವರ್ಷಗಳಲ್ಲಿ ಉದ್ದಕ್ಕೂ ಭಾರತದ ಭಾವೈಕ್ಯ ಬುನಾದಿಯನ್ನು ಕೋಮು ದ್ವೇಷದಿಂದ, ಬಾಂಬ್ ಭಯೋತ್ಪಾದನೆಗಳಿಂದ ಬುಡಮೇಲು ಮಾಡುತ್ತಲೇ ಬರುತ್ತಿರುವ ಆರೆಸ್ಸೆಸ್ಸ್ ಬಗ್ಗೆ ಆರೆಸ್ಸೆಸ್ಸಿನ ಪ್ರಚಾರಕರೇ ಆಗಿದ್ದ ಮೋದಿಯೂ ಕೂಡ ಕಳೆದ 11 ವರ್ಷಗಳ ಭಾಷಣಗಳಲ್ಲಿ ಪ್ರಸ್ತಾಪ ಮಾಡಿರಲಿಲ್ಲ. ಹಾಗಿರುವಾಗ ಈಗ ಯಾಕೆ ಅದನ್ನು ಗರ್ವದಿಂದ ಪ್ರಸ್ತಾಪ ಮಾಡಿದರು?
ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೇಶವು ವಿನಾಶದೆಡೆಗೆ ದಾಪುಗಾಲು ಇಡುತ್ತಿದೆ. 12 ವರ್ಷಗಳ ತಮ್ಮ ಸುದೀರ್ಘ ಪ್ರಧಾನಮಂತ್ರಿಗಿರಿಯಲ್ಲಿ ಅವರ ಆಪ್ತ ಕ್ರೋನಿ ಬಂಡವಾಳಿಗರಾದ ಆದಾನಿ-ಅಂಬಾನಿಗಳಂತ 1176 ಬಿಲಿಯನಾಧೀಶರು ಮಾತ್ರ ಅಮೃತಕಾಲವನ್ನು ಕಂಡರು. ಉಳಿದಂತೆ ಮೋದಿ ಅವಧಿಯಲ್ಲಿ ಭಾರತದ ಬಹುಜನರ ಹಸಿವು, ಬಡತನ, ಅಸಮಾನತೆ, ನಿರುದ್ಯೋಗ, ಅಪೌಷ್ಟಿಕತೆ, ವಸತಿ ಹೀತೆ, ಆದಾಯ ಮತ್ತು ಆರೋಗ್ಯ ಕುಸಿತಗಳು ಪ್ರಪಾತವನ್ನು ಮುಟ್ಟಿವೆ. ಹೆಚ್ಚುತ್ತಿರುವ ಜಾತಿ ದೌರ್ಜನ್ಯ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ, ಹೆಚ್ಚುತ್ತಿರುವ ಶಿಶು ಮರಣ, ಬಾಣಂತಿಯರ ಸಾವು, ಪ್ರಭುತ್ವ ಬೆಂಬಲಿತಾ ಕೋಮು ದ್ವೇಶದ ರಾಜಕಾರಣ, ಅಭಿವ್ಯಕ್ತಿ ಸ್ವಾತಂತ್ಯದ ಮೇಲಿನ ಹಲ್ಲೆ, ಅಮೆರಿಕದ ಗುಲಾಮಿ ವಿದೇಶಾಂಗ ನೀತಿ ಅನುಸರಿಸುತ್ತಿರುವುದರಿಂದ ಹೆಚ್ಚಾಗುತ್ತಿರುವ ಜಾಗತಿಕ ಏಕಾಂಗಿತನ, ಆಪರೇಶನ್ ಸಿಂಧೂರದ ಘೋರ ವೈಫಲ್ಯ ಇತ್ಯಾದಿ ವೈಫಲ್ಯಗಳೇ ಮೋದಿ ಆಳ್ವಿಕೆಯ ವಾಸ್ತವಗಳು.
ಆದರೆ ಅದನ್ನೇ ಸಾಧನೆಯೆಂದು ಜನರ ಮುಂದಿಟ್ಟರೆ ಜನರು ಸಂಪೂರ್ಣ ಒಪ್ಪುವುದಿಲ್ಲವೆಂಬ ಪಾಠವನ್ನು 2024 ರ ಚುನಾವಣೆ ಫಲಿತಾಂಶ ಕಲಿಸಿದೆ. ಹೀಗಾಗಿ ಸಲ್ಲದ ಹೆಮ್ಮೆಗಳ ಇಲ್ಲದ ಆತಂಕಗಳ ನೆರೆಟಿವ್ ಕಟ್ಟಲು 12 ನೇ ಸ್ವಾತಂತ್ರ್ಯ ಭಾಷಣದಲ್ಲಿ ಪ್ರಯತ್ನಿಸಿದ್ದಾರೆ. ಅದರ ಭಾಗವಾಗಿಯೇ ಆರೆಸ್ಸೆಸ್ ಮತ್ತು ಸಾವರ್ಕರ್. ಹಾಗೂ ನೆರೆ ದೇಶಗಳು ದುರುದ್ದೇಶಪೂರ್ವಕವಾಗಿ ಭಾರತದ ಜನಸಂಖ್ಯೆಯನ್ನು ಏರುಪೇರು ಮಾಡಲೆಂದೇ ಅಕ್ರಮ ವಲಸೆ ಮಾಡುತ್ತಿದ್ದಾರೆ. ನಮ್ಮ ಯುವಕರ ಬದುಕನ್ನು ಹಾಳು ಮಾಡುತ್ತಿದ್ದಾರೆ ಮತ್ತು ನಮ್ಮ ಸಹೋದರಿಯರನ್ನು ಮತ್ತು ತಾಯಂದಿರನ್ನು ಗುರಿಯಾಗಿರಿಸಿಕೊಂಡಿದ್ದಾರೆ ಎಂಬ ಪಕ್ಕ ಭಜರಂಗದಳದ ಸ್ಥಾನೀಯ ನಾಯಕನೊಬ್ಬನ ರೀತಿಯ ಕೋಮು ದ್ವೇಷಿ ಸ್ವಾತಂತ್ರ್ಯ ಭಾಶಣ. ಇದರ ಜೊತೆಗೆ, ಕೇಂದ್ರದ ಪೆಟ್ರೋಲಿಯಂ ಇಲಾಖೆಯು ಸ್ವಾತಂತ್ರ್ಯ ದಿನದಂದು ಒಂದು ಚಿತ್ರವನ್ನು ಅಧಿಕೃತವಾಗಿ ಟ್ವೀಟ್ ಮಾಡಿತ್ತು. ಅದರಲ್ಲಿ ಆರೆಸ್ಸೆಸ್ನ ಮತ್ತು ಹಿಂದೂ ರಾಷ್ಟ್ರ ಹಾಗೂ ಹಿಂದೂತ್ವ ಫ಼್ಯಾಶಿಸ್ಟ್ ರಾಜಕಾರಣದ ಪಿತಾಮರಾದ ಮತ್ತು 1911 ರ ನಂತರ ಜೀವನದುದ್ದಕ್ಕೂ ಭಾರತದ ಸ್ವಾತಂತ್ರ್ಯದ ವಿರುದ್ಧವಾಗಿ ಬ್ರಿಟಿಷರ ಜೊತೆ ಕೈಗೂಡಿಸಿದ್ದ ಸ್ವಾತಂತ್ರ್ಯ ದ್ರೋಹಿ ಸಾವರ್ಕರ್ ಚಿತ್ರವನ್ನು ಗಾಂಧಿ, ಸುಭಾಶ್ ಮತ್ತು ಭಗತ್ ಸಿಂಗರಿಗಿಂತಲೂ ಮೇಲಿರಿಸಲಾಗಿತ್ತು.
ಕಳೆದ 11 ವರ್ಷಗಳ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಆರೆಸ್ಸೆಸ್ ಮತ್ತು ಸಾವರ್ಕರ್ ಅವರುಗಳನ್ನು ಅಧಿಕೃತವಾಗಿ ಹೊಗಳಾಡದೇ ಇದ್ದದ್ದನ್ನು ತನ್ನ 12 ನೇ ಭಾಶಣದಲ್ಲಿ ಮಾಡಿರುವುದು ಆರೆಸ್ಸೆಸ್ ಮತ್ತು ಮೋದಿ ನೇತೃತ್ವದ ಬಿಜೆಪಿಯ ನಡುವೆ ನಡೆಯುತ್ತಿದ್ದ ಸಣ್ಣ ಅಂತರಿಕ ಸಂಘರ್ಷದ ಪರಿಣಾಮವೂ ಆಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಅಬ್ಬರಿಸಿ ಕೊಚ್ಚಿಕೊಂಡಷ್ಟು ಸೀಟುಗಳನ್ನು ಪಡೆಯದ್ದರ ಹಿಂದೆ ಮೋದಿ ನೇತೃತ್ವ ಬಿಜೆಪಿ ಆರೆಸ್ಸೆಸ್ಸಿನ ಬಗ್ಗೆ ತೋರಿದ ಉದಾಸೀನವೂ ಒಂದು ಕಾರಣವಾಗಿತ್ತು. ಫಲಿತಾಂಶದ ನಂತರ ಮತ್ತೆ ಎರಡು ಬಣದ ನಡುವೆ ಉಂಟಾಗಿದ್ದ ಅಲ್ಪಕಾಲಿಕ ಹಾಗೂ ಅಲ್ಪಪ್ರಮಾಣದ ವೈಮನಸ್ಯ ಬಗೆಹರಿದಂತೆ ಕಾಣುತ್ತಿದೆ. ಅದೇ ಮೋದಿಯ ಭಾಷಣದಲ್ಲೂ, ಹೊಸ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಮೋದಿ ಭಕ್ತನಿಗಿಂತ ಆರೆಸ್ಸೆಸ್ ವ್ಯಕ್ತಿ ಆಯ್ಕೆಯಾಗಿರುವುದರಲ್ಲೂ ವ್ಯಕ್ತವಾಗುತ್ತಿದೆ.
ಅವರುಗಳ ನಡುವಿನ ಕೋಳಿಜಗಳ ಸುಖಾಂತ್ಯ ಕಂಡಿದ್ದರೂ ಮೋದಿ ಮಾಡಿದ ಭಾಷಣವು ಆರೆಸ್ಸೆಸ್ ಮತ್ತು ಸಾವರ್ಕರ್ ಬಗ್ಗೆ ಮತ್ತು ದೇಶದ ಸ್ವಾತಂತ್ರ್ಯದ ಪರಿಕಲ್ಪನೆಯ ಬಗ್ಗೆಯೆ ತಪ್ಪು ಪರಿಕಲ್ಪನೆಯನ್ನು ಹುಟ್ಟುಹಾಕುವ ಉದ್ದೇಶ ಹೊಂದಿದೆ. ಸುಳ್ಳು ಇತಿಹಾಸದ ಆಧಾರದಲ್ಲಿ ಹಾಗೂ ಪೊಳ್ಳು ಭವಿಷ್ಯವನ್ನು ಕಟ್ಟುವ ಅಪಾಯ ಹೊಂದಿದೆ. ಹೀಗಾಗಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮತ್ತು ಭಾವೈಕ್ಯ ಭಾರತ ನಿರ್ಮಾಣದಲ್ಲಿ ಸಾವರ್ಕರ್ ಮತ್ತು ಆರೆಸ್ಸೆಸ್ಸುಗಳ ಅತ್ಯಂತ ವಿನಾಶಕಾರಿ ಪಾತ್ರವೇನಿತ್ತೆಂದು ಈಗಾಗಲೇ ಹಲವು ಬಾರಿ ಇದೇ ಅಂಕಣದಲ್ಲಿ ಪ್ರಸ್ತಾಪಿಸಲಾಗಿದೆ. ಅದರೆ ಈ ಸಂದರ್ಭದಲ್ಲಿ ಸಾವರ್ಕರ್ ಮತ್ತು ಆರೆಸ್ಸೆಸ್ಸುಗಳಿಗೆ ದೇಶದ ಸ್ವಾತಂತ್ರ್ಯದ ಬಗ್ಗೆ ಏನು ಅಭಿಪ್ರಾಯವಿತ್ತು ಮತ್ತು ಅವರು ವಹಿಸಿದ ಪಾತ್ರವೇನು ಎಂಬುದನ್ನು ಮತ್ತೊಮ್ಮೆ ಸಾರ್ವಜನಿಕ ಚರ್ಚೆಗೆ ತರುವ ಅಗತ್ಯವಿದೆ.
ಸಾವರ್ಕರ್ ಸ್ವಾತಂತ್ರ್ಯ ವೀರನೇ? ಅಥವಾ ಸ್ವಾತಂತ್ರ್ಯ ವಿರೋಧಿಯೇ?
ಸಾವರ್ಕರ್ ಪ್ರತಿಪಾದಕರು ಮತ್ತು ಅವರ ವಿರೋಧಿಗಳು ಇಬ್ಬರೂ ಕೂಡ ಸಾವರ್ಕರ್ ಅವರ ರಾಜಕೀಯ ಬದುಕನ್ನು ಎರಡು ಭಾಗಗಳನ್ನಾಗಿ ಅರ್ಥ ಮಾಡಿಕೊಂಡರೆ ವಿಷಯಕ್ಕೆ ಸ್ಪಷ್ಟತೆ ಬರುತ್ತದೆ. ಸಾವರ್ಕರ್ ಅವರು 1911 ರಲ್ಲಿ ಲಂಡನ್ನಿನಲ್ಲಿ ಬಂಧನಕ್ಕೊಳಗಗುವ ತನಕ ಕ್ರಾಂತಿಕಾರಿ ಅಭಿನವ್ ಭಾರತ್ ಸಂಘಟನೆಯ ಬ್ರಿಟಿಷ್ ವಿರೋಧಿ ಕ್ರಾಂತಿಕಾರಿ ಚಟುವಟಿಕೆಗಳಿಗೆ ತೆರೆಮರೆಯಲ್ಲಿ ರಾಜಕೀಯ ಮಾರ್ಗದರ್ಶನ ಮಾಡುತ್ತಿದ್ದರು. 1906 ರಲ್ಲಿ ಅವರು ಲಂಡನ್ನಿಗೆ ಹೋದಾಗ ಅಲ್ಲಿಯ ಇಂಡಿಯಾ ಹೌಸ್ ನಲ್ಲಿ ಸಭೆ ಸೇರುತ್ತಿದ್ದ ಭಾರತದ ಕ್ರಾಂತಿಕಾರಿ ತರುಣರಿಗೆ ಬ್ರಿಟಿಷ್ ವಿರೋಧಿ ಬಂಡಾಯದ ದೀಕ್ಷೆ ಕೊಡುತ್ತಿದ್ದರು. ಮತ್ತು ಅಲ್ಲಿಂದಲೇ ತಮ್ಮ ಮಹಾರಾಷ್ಟ್ರದ ಸ್ನೇಹಿತರಿಗೆ ಪಿಸ್ತೂಲು ಇತ್ಯಾದಿ ಸರಬರಾಜು ಮಾಡುತ್ತಿದ್ದರು.
ಆದರೆ ಈ ಪ್ರಕ್ರಿಯೆಯಲ್ಲಿ ಸೆರೆಯಾಗುತ್ತಿದ್ದ ಯಾರೂ ಸಾವರ್ಕರ್ ಹೆಸರು ಹೇಳುತ್ತಿರಲಿಲ್ಲ. ಉದಾಹರಣೆಗೆ ಲಂಡನ್ನಿನ್ನಲಿ ಬ್ರ್ರಿಟಿಷ್ ಅಧಿಕಾರಿ ಕರ್ಜನ್ ವೈಲಿಯನ್ನು ಕೊಲ್ಲಲು ಮದನ್ಲಾಲ್ ಧಿಂಗಾನನ್ನು ಅಥವಾ 1948 ರಲ್ಲಿ ಗಾಂಧಿಯನ್ನು ಕೊಲ್ಲಲು ನಾಥೂರಾಮ್ ಗೋಡ್ಸೆ ಯನ್ನು ಪ್ರೇರೇಪಿಸಿದ್ದು ಸಾವರ್ಕರ್ ಅವರೇ ಆದರೂ ಕೊಲೆಯಲ್ಲಿ ಅವರ ಪಾತ್ರದ ಬಗ್ಗೆ ಅವರಿಬ್ಬರೂ ಸಾಕ್ಷಿ ಹೇಳಲಿಲ್ಲ. ಆದರೆ1909 ರಲ್ಲಿ ಅಭಿನವ್ ಭಾರತ್ ನ ಒಂದು ಗುಂಪು ಮಹಾರಾಷ್ಟ್ರದ ನಾಸಿಕ್ನಲ್ಲಿ ಬ್ರಿಟಿಷ್ ಮ್ಯಾಜಿಸ್ಟ್ರೇಟ್ ಎ.ಟಿ.ಎಂ. ಜಾಕ್ಸನ್ ಕೊಂದುಹಾಕಿತು. ಅದಕ್ಕೆ ಬಳಸಲಾದ ಪಿಸ್ತೂಲು ಸಾವರ್ಕರ್ ಲಂಡನ್ನಿನಿಂದ ಕಳಿಸಿದ್ದು ಎಂದು ಸಾಕ್ಷಿ ಸಿಕ್ಕಿತು. ಇದೊಂದು ಪ್ರಕರಣದಲ್ಲಿ ಮಾತ್ರ ಮೊದಲ ಬಾರಿಗೆ ಹಾಗೂ ಕೊನೆಯ ಬಾರಿಗೆ ಸಾಕ್ಷಿ ಸಮೇತ ಸಿಕ್ಕಿಬಿದ್ದ ಸಾವರ್ಕರ್ ಶಿಕ್ಷೆಗೆ ಗುರಿಯಾದರು. ಅವರ ವಿಚಾರಣೆಯಲ್ಲಿ ಸಾವರ್ಕರ್ ಅವರು ಬ್ರಿಟಿಷ ಸಾಮ್ರಾಜ್ಯವನ್ನು ಹಿಂಸಾತ್ಮಕವಾಗಿ ಬುಡಮೇಲು ಮಾಡಬೇಕೆಂಬ ಆಶಯವನ್ನು ಹೊಂದಿದ್ದ ಅಭಿನವ್ ಭಾರತ್ ಗುಂಪಿನ ನಾಯಕ ಎಂದು ಸಾಬೀತಾಯಿತು. ಸಾಮಾನ್ಯವಾಗಿ ಬ್ರಿಟಿಷರು ಇಂಥ ಕ್ರಾಂತಿಕಾರಿ ನಾಯಕರನ್ನು ಸೆರೆ ಹಿಡಿಯುವ ಮುನ್ನವೇ ಕೊಂದು ಹಾಕುತ್ತಿದ್ದರು ಅಥವಾ ಗಲ್ಲುಶಿಕ್ಷೆ ವಿಧಿಸುತ್ತಿದ್ದರು.
ಆದರೆ ಸಾವರ್ಕರ್ ಅವರಿಗೆ 50 ವರ್ಷಗಳ ಶಿಕ್ಷೆ ವಿಧಿಸಿ ಆ ಕಾಲಕ್ಕೆ ಹಿಂಸಾತ್ಮಕ ದಾರಿ ಹಿಡಿದಿದ್ದ ಎಲ್ಲಾ ಕ್ರಾಂತಿಕಾರಿಗಳಿಗೆ ಕೊಡುತ್ತಿದ್ದ ಕರಿನೀರಿನ ಶಿಕ್ಷೆಯನ್ನು ಕೊಟ್ಟರು. ಅವರಿಗೆ ಮುಂಚೆಯೂ ಅಲ್ಲಿ ಸಾವಿರಾರು ಕ್ರಾಂತಿಕಾರಿ ಹೋರಾಟಗಾರರು ಹತ್ತಾರು ವರ್ಷ ಶಿಕ್ಷೆ ಗುರಿಯಾಗಿ ಒಂದೂ ಕ್ಷಮಾಪಣಾ ಪತ್ರ ಬರೆಯದೆ ಶಿಕ್ಷೆ ಮುಗಿಸಿ ಹೊರಬಿದ್ದಿದ್ದಾರೆ.ಅವರಲ್ಲಿ ಕ್ರಾಂತಿಕಾರಿ ಕಮ್ಯುನಿಸ್ಟರ ಸಂಖ್ಯೆಏ ಹೆಚ್ಚು. ಆದರೆ ಅದನ್ನು ಈಗ ಕಮ್ಯುನಿಸ್ಟರೂ ಮರೆತೇ ಬಿಟ್ಟಂತಿದೆ. ಆದರೆ ಸಾವರ್ಕರ್ ಅವರಿಗೆ 50 ವರ್ಷ ಜೀವಾವಧಿ ಶಿಕ್ಷೆಯಾಗಿದ್ದರೂ ಅವರು ಅಲ್ಲಿ ಶಿಕ್ಷೆ ಅನುಭವಿಸಿದ್ದು ಕೇವಲ 10 ವರ್ಷಗಳು ಮಾತ್ರ. 1921 vರಲ್ಲೇ ಅವರನ್ನು ಅಂಡಮಾನಿನಿಂದ ಪುಣೆಯ ಯರವಾಡ ಜೈಲಿಗೆ ವರ್ಗಾಯಿಸಲಾಯಿತು. ಅದಾದ ಎರಡೇ ವರ್ಷದಲ್ಲಿ ಅವರಿಗೆ ಜೈಲಿನಿಂದ ಬಿಡುಗಡೆ ಮಾಡಿ ರತ್ನಗಿರಿಯ ಅವರ ಮನೆಯಲ್ಲಿ ಇರಲು ಅವಕಾಶ ಮಾಡಿಕೊಡಲಾಯಿತು. 1937 ರಲ್ಲಿ ಅವರ ಮೇಲೆ ವಿಧಿಸಲಾಗಿದ್ದ ಎಲ್ಲ ನಿರ್ಬಂಧಗಳನ್ನು ಬ್ರಿಟಿಷರು ತೆಗೆದುಹಾಕಿದರು. 1923 ರಲ್ಲಿ ರತ್ನಗಿರಿಯಲ್ಲಿ ಮನೆಗೆ ನರಳಿದ ನಂತರ ಬ್ರಿಟಿಷ್ ಸರ್ಕಾರ ಮತ್ತೆ ಅವರನ್ನು ನಂತರ ಯಾವತ್ತೂ ಬಂಧಿಸಲೇ ಇಲ್ಲ.
ಕಾರಣವಿಷ್ಟೆ. 1911 ರಲ್ಲಿ ಬ್ರಿಟಿಷರು ಸಾವರ್ಕರ್ ಅವರನ್ನು ಬಂಧಿಸಿದಾಗ ಬ್ರಿಟಿಷ್ ವಿರೋಧಿ ಕ್ರಾಂತಿಕಾರಿ ನಾಯಕ ಎಂದುಕೊಂಡಿದ್ದರು. ಆದ್ದರಿಂದಲೇ ಅಂಡಮಾನ್ ಶಿಕ್ಷೆಯನ್ನೂ ಕೊಟ್ಟರು. ಆದರೆ ಯಾವಾಗ ಸಾವರ್ಕರ್ ಅವರು ಶಿಕ್ಷೆ ಪ್ರಾರಂಭಗೊಂಡ ಎರಡು ತಿಂಗಳಲ್ಲೇ ಶರಣಾಗತಿ ಪತ್ರಗಳನ್ನು ಬರೆಯಲು ಪ್ರಾರಂಭಿಸಿದರೋ, ಅಂಡಮಾನ್ ಜೈಲಿನಲ್ಲಿ ಬ್ರಿಟಿಷ್ ಅಧಿಕಾರಿಗಳ ಜೊತೆಗೆ ಕೈಗೂಡಿಸಿ ಸನ್ನಡತೆಯನ್ನೊ ತೋರಿ ಮತ್ತೆಂದೂ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಧ್ವನಿ ಎತ್ತುವುದಿಲ್ಲ ಎಂಬುದನ್ನು ಸಾಬೀತುಪಡಿಸಿದರೋ, ಆಗ ಅವರನ್ನು ಬ್ರಿಟಿಷರು ಬಿಡುಗಡೆ ಮಾಡಿ ಗೃಹಬಂಧನದ ಸೌಕರ್ಯ ಒದಗಿಸಿಕೊಟ್ಟರು. 1923-37 ರ ಅವಧಿಯಲ್ಲಿ ದೇಶದಲ್ಲಿ ನಡೆದ ಅಸಹಕಾರ ಚಳವಳಿ, ದಂಡಿ ಸತ್ಯಾಗ್ರಹ, ಸಂಪೂರ್ಣ ಸ್ವಾತಂತ್ರ್ಯ ಘೋಷಣೆ ಎಲ್ಲವನ್ನೂ ಸಾವರ್ಕರ್ ಅವರು ರತ್ನಗಿರಿಯಿಂದಲೇ ವಿರೋಧಿಸಿದ್ದು ಮಾತ್ರವಲ್ಲದೇ ಬ್ರಿಟಿಷರ ಪರವಾಗಿ ಹಿಂದೂ ಯುವಕರನ್ನು ಸಂಘಟಿಸುತ್ತಾರೆ. ಅಷ್ಟು ಮಾತ್ರವಲ್ಲ ಬ್ರಿಟಿಷ್ ಸಾಮ್ರಾಜ್ಯಕ್ಕೆ ಅನುಕೂಲವಾಗುವಂತೆ ಹಿಂದೂ-ಮುಸ್ಲಿಂ ಕೋಮು ವಿಭಜನೆಯನ್ನೂ ಹುಟ್ಟುಹಾಕುತ್ತಾರೆ. ಹೀಗೆ ತಮ್ಮ ಬ್ರಿಟಿಷರ ಪರವಾದ ಹಾಗೂ ಸ್ವಾತಂತ್ರ್ಯ ಹೋರಾಟಕ್ಕೆ ವಿರೋಧವಾದ ನಿಲುವುಗಳನ್ನು ತಮ್ಮ ನಡೆನುಡಿಗಳಿಂದ ಸಾಬೀತು ಪಡಿಸಿದಕ್ಕಾಗಿಯೇ ಇತರ ಕ್ರಾಂತಿಕಾರಿಗಳನ್ನು ಕೊಂದುಹಾಕಿದ, ಕಾಂಗ್ರೆಸ್ಸಿನಂಥ ಮಂದ ಸ್ವಾತಂತ್ರ್ಯವಾದಿಗಳನ್ನು ಜೈಲು ಶಿಕ್ಷೆಗೆ ದೂಡುತ್ತಿದ್ದ ಬ್ರಿಟಿಷ್ ಸರ್ಕಾರ ಸಾವರ್ಕರ್ ಅವರನ್ನು ಮಾತ್ರ ಬಿಡುಗಡೆ ಮಾಡಿತು.
ಸಾವರ್ಕರ್- ಧರ್ಮಾಧಾರಿತ ದೇಶ ವಿಭಜನೆಯ ಮೊದಲ ಸೈದ್ಧಾಂತಿಕ ಪ್ರತಿಪಾದಕ
ದ್ವಿರಾಷ್ಟ್ರ ಸಿದ್ಧಾಂತವನ್ನು ಮೊದಲು ಮಂಡಿಸಿದ್ದು ಅಲಿಘರ್ ವಿಶ್ವವಿದ್ಯಾಲಯದ ಸರ್ ಸಯ್ಯದ್ ಅಹ್ಮದ್ ಖಾನ್ ಹೊರತು . ಸಾವರ್ಕರ್ ಅಲ್ಲ ಮತ್ತು ಹಿಂದೂ ಮಹ ಸಭಾ ಕೊನೆಯವರೆಗೂ ಅಖಂಡ ಭಾರತಕ್ಕೆ ಹೋರಾಡುತ್ತಿದ್ದರು ಎಂಬ ಅಂತೆಕಂತೆಗಳು ಕಾಲಕಾಲಕ್ಕೆ ಹಿಂದೂತ್ವ ವಾಟ್ಸಾಪ್ ಯುನಿವರ್ಸಿಟಿಯಲ್ಲಿ ಹರಿದಾಡುತ್ತಿರುತ್ತದೆ. ಆದರೆ ಸಂಘಪರಿವಾರದವರು ಮಾನ್ಯ ಮಾಡುವ ಪ್ರಖ್ಯಾತ ಇತಿಹಾಸಕಾರ ಆರ್ಸಿ ಮಜುಂದಾರ್ ಅವರು ದ್ವಿರಾಷ್ಟ್ರ ಸಿದ್ಧಾಂತದ ಹುಟ್ಟಿನ ಬಗ್ಗೆ ಹೀಗೆ ಹೇಳುತ್ತಾರೆ: “,,,ದ್ವಿರಾಷ್ಟ್ರ ಸಿದ್ಧಾಂತದ ಸೃಷ್ಟಿಕರ್ತರು ಬಂಗಾಳ ಪ್ರಾಂತ್ಯದ ನಭಾ ಗೋಪಾಲ್ ಅವರು. ಮುಸ್ಲಿಂ ಲೀಗ್ ಈ ಬಗ್ಗೆ ಪಸ್ತಾಪ ಮಾಡುವ 50 ವರ್ಷಗಳಿಗೆ ಮುಂಚೆ ಅವರು ಭಾರತದಲ್ಲಿ ಹಿಂದೂ ಮತ್ತು ಮುಸ್ಲಿಂ ಎಂಬ ಎರಡು ರಾಷ್ಟ್ರಗಳಿವೆ ಎಂದು ಪ್ರತಿಪಾದಿಸಿದ್ದರು” ( Majumdar, R. C., Three Phases of India’s Struggle for Freedom)
ಅಂಬೇಡ್ಕರ್ ಅವರು ತಮ್ಮ ಪಾಕಿಸ್ತಾನ ಅಥವಾ ಭಾರತದ ವಿಭಜನೆಯ ಪ್ರಶ್ನೆ ಎಂಬ ವಿದ್ವತ್ಪೂರ್ಣ ಬರಹದಲ್ಲಿ ಉಲ್ಲೇಖಿಸುವಂತೆ ಆರ್ಯ ಸಮಾಜದ ಭಾಯಿ ಪರಮಾನಂದ್ ಅವರು 1909 ರ ಸುಮಾರಿನಲ್ಲೇ ಹೀಗೆ ಹೇಳುತ್ತಾರೆ: “…ಸಿಂಧ್ ಪ್ರಾಂತ್ಯದ ಆಚೆಗಿರುವ ಪ್ರಾಂತ್ಯಗಳನ್ನು ಅಫ಼್ಘಾನಿಸ್ತಾನ ಮತ್ತು ವಾಯುವ್ಯ ಪ್ರಾಂತ್ಯಗಳ ಜೊತೆ ಸೇರಿಸಿ ಮುಸಲ್ಮಾನ ಸಾಮ್ರಾಜ್ಯವನ್ನು ಸ್ಥಾಪಿಸಬೇಕು. ಅಲ್ಲಿರುವ ಹಿಂದೂಗಳು ಇಲ್ಲಿಗೂ, ಇಲ್ಲಿರುವ ಮುಸ್ಲಿಮರು ಅಲ್ಲಿಗೂ ಹೋಗಬೇಕು” ಎಂದು ಹೇಳುವ ಮೂಲಕ ಮುಸ್ಲಿಂ ಲೀಗ್, ಜಿನ್ನಾ, ಸಯ್ಯದ್ ಅಹ್ಮದ್ ಖಾನ್ ಅವರಿಗಿಂತಲೂ ಮುಂಚೆಯೇ ದ್ವಿರಾಷ್ಟ್ರ ಸಿದ್ಧಾಂತ ಪ್ರತಿಪಾದಿಸಿದ್ದರು. ಅಷ್ಟು ಮಾತ್ರವಲ್ಲ. 1924 ರಲ್ಲಿ ಆರ್ಯಾ ಸಮಾಜದ ಹಾಗೂ ಹಿಂದೂ ಮಹಾಸಭಾ ಹಿನ್ನೆಲೆಯ ಪ್ರಮುಖ ಕಾಂಗ್ರೆಸ್ ನಾಯಕರಾಗಿದ್ದ ಲಾಲಾ ಲಜಪತ್ ರಾಯ್ ಅವರು ಟ್ರಿಬ್ಯೋನ್ ಪತ್ರಿಕೆಗೆ 1924 ರಲ್ಲಿ ಬರೆದ ಲೇಖನದಲ್ಲಿ : “..ನನ್ನ ಸಲಹೆ ಏನೆಂದರೆ ಮುಸ್ಲಿಮರು ಹೆಚ್ಚಿರುವ ಪಶ್ಚಿಮ ಪಂಜಾಬನ್ನು ಮುಸ್ಲಿಂ ಆಡಳಿತದ ಪ್ರಾಂತ್ಯವನ್ನಾಗಿಯೂ, ಸಿಕ್ಕರು ಹಾಗೂ ಹಿಂದೂಗಳು ಹೆಚ್ಚಿರುವ ಪೂರ್ವ ಪಂಜಾಬನ್ನು ಹಿಂದೂ ಆಡಳಿತದ ಪ್ರಾಂತ್ಯವನ್ನಾಗಿಯೂ ವಿಭಜಿಸಬೇಕು”. ಎಂದು ಬಲವಾಗಿ ಪ್ರತಿಪಾದಿಸಿದ್ದರು. ಹೀಗೆ ದ್ವಿರಾಷ್ಟ್ರ ಸಿಧಾಂತದ ಜನಕರು ಹಿಂದೂರಾಷ್ಟ್ರವಾದಿಗಳೇ ಆಗಿದ್ದಾರೆ.
ಹಾಗಿದ್ದಲ್ಲಿ ಸಾವರ್ಕರ್ ಅವರು ದ್ವಿರಾಷ್ಟ್ರ ಸಿದ್ಧಾಂತದ ವಿರುದ್ಧವಿದ್ದರೇ? ಇದರ ಬಗ್ಗೆ 1937 ರಲ್ಲಿ ಅವರು ಹೀಗೆ ಬರೆಯುತ್ತಾರೆ: “..ಭಾರತದ ಒಳಗೆ ಎರಡು ಪರಸ್ಪರ ವಿರುದ್ಧ ರಾಷ್ಟ್ರಗಳಿವೆ. ಕೆಲವು ಬಾಲಿಶ ರಾಜಕಾರಣಿಗಳು ಭಾರತ ಈಗಾಗಲೇ ಒಂದು ರಾಷ್ಟ್ರವಾಗಿದೆ ಎಂದು ಹೇಳುತ್ತಾರೆ. ಆದರೆ ಭಾರತದ ಒಂದು ರಾಷ್ಟ್ರ ಅಲ್ಲವೇ ಅಲ್ಲ. ಬದಲಿಗೆ ಭಾರತದೊಳಗೆ ಹಿಂದೂ ರಾಷ್ಟ್ರ ಮತ್ತು ಮುಸ್ಲೀಮ್ ರಾಷ್ಟ್ರವೆಂಬ ಎರಡು ರಾಷ್ಟ್ರಗಳಿವೆ”. (ಸಾವರ್ಕರ್ ಸಮಗ್ರ ವಾಗ್ಮಯ, ೬ ನೇ ಸಂಪುಟ, ಪುಟ ೨೯೬) ಇದಾದ ನಂತರ ಜಿನ್ನಾ 1940 ರಲ್ಲಿ ದ್ವಿರಾಷ್ಟ್ರ ಸಿದ್ಧಾಂತವನ್ನು ಮುಂದಿಟ್ಟಾಗ ಸಾವರ್ಕರ್ ಅವರು : “..ಜಿನ್ನಾ ಅವರ ಹೇಳಿಕೆಯ ಜೊತೆ ನನಗೆ ಯಾವುದೇ ತಗಾದೆಯಿಲ್ಲ. ನಾವು ಹಿಂದೂಗಳು ಬೇರೆಯದೇ ಆದ ರಾಷ್ಟ್ರ. ಹಿಂದೂ ಮತ್ತು ಮುಸ್ಲಿಂ ಬೇರೆಬೇರೆ ರಾಷ್ಟ್ರಗಳೇ ಆಗಿದ್ದಾರೆ” ಎನ್ನುತ್ತಾರೆ.
ಈ ಬಗ್ಗೆ ಅಂಬೇಡ್ಕರ್ ಅವರು ತಮ್ಮ ಪಾಕಿಸ್ತಾನ್.. ಬರಹದಲ್ಲಿ ಹೀಗೆ ಹೇಳುತ್ತಾರೆ: “..ವಿಚಿತ್ರವೆಂದರೆ ಭಾರತ ಒಂದು ರಾಷ್ಟ್ರವೋ ಎರಡು ರಾಷ್ಟ್ರವೋ ಎಂಬ ಸಿದ್ಧಾಂತದ ಬಗ್ಗೆ ಸಾವರ್ಕರ್ ಮತ್ತು ಜಿನ್ನಾ ಪರಸ್ಪರ ವಿರುದ್ಧವಾದುದನ್ನು ಹೇಳುತ್ತಿಲ್ಲ. ಬದಲಿಗೆ ಅ ವಿಷಯದಲ್ಲಿ ಅವರಿಬ್ಬರಿಗೂ ಸಂಪುರ್ಣ ಸಹಮತಿ ಇದೆ. ಅವರಿಬ್ಬರೂ ಆ ವಿಷಯದಲ್ಲಿ ಸಮ್ಮತಿ ಇರುವುದು ಮಾತ್ರವಲ್ಲ. ಭಾರತದೊಳಗೆ ಹಿಂದೂ ರಾಷ್ಟ್ರ ಮತ್ತು ಮುಸ್ಲಿಂ ರಾಷ್ಟ್ರ ಎಂಬ ಎರಡು ರಾಷ್ಟ್ರಗಳಿವೆ ಎಂದು ಅವರಿಬ್ಬರೂ ಬಲವಾಗಿ ಪ್ರತಿಪದಿಸುತ್ತಾರೆ.”* ಎಂದು ಬರೆಯುತ್ತಾರೆ. ಈ ದ್ವಿರಾಷ್ಟ್ರ ಸಿದ್ಧಾಂತಕ್ಕೆ ಸಾವರ್ಕರ್ ಪರಿಹಾರ ಏನೆಂದರೆ ಭಾರತ ಹಿಂದೂ ರಾಶ್ಟ್ರವಾಗುವುದು. ಮುಸ್ಲಿಮರು ತಮ್ಮ ಪ್ರತ್ಯೇಕ ಅಸ್ಥಿತ್ವವನ್ನೇ ಬಿಟ್ಟುಕೊಟ್ಟು ಹಿಂದೂ ರಾಷ್ಟ್ರದಲ್ಲಿ ಲೀನವಾಗುವುದು. ಆದರೆ ಈ ಹಿಂದೂ ರಾಷ್ಟ್ರ ಮನುಸ್ಮೃತಿಯ ಆಧಾರದಲ್ಲಿ ಬ್ರಾಹ್ಮಣಶಾಹಿ ಪ್ರಜಾತಂತ್ರ ವಿರೋಧಿ ರಾಷ್ಟ್ರ. ಆದ್ದರಿಂದಲೇ ಅಂಬೇಡ್ಕರ್ ಅವರು ಅದೇ ಬರಹದಲ್ಲಿ ; ಭಾರತವು ಹಿಂದೂ ರಾಷ್ಟ್ರವಾಗುವುದೆಂದರೆ ಅದಕ್ಕಿಂತ ಮತ್ತೊಂದು ವಿಪತ್ತು ಮತ್ತೊಂದಿಲ್ಲ. ಎಂದು ಎಚ್ಚರಿಸಿದ್ದರು.
ಸ್ವಾತಂತ್ರ್ಯ ವಿರೋಧಿ RSS!
ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಅಧ್ಯಯನ ಮಾಡಿದವರಿಗೆ ಸಂಘಪರಿವಾರ ಹಾಗೂ ಸಾವರ್ಕರರ ಹಿಂದೂ ಮಹಾ ಸಭಾ ಹೇಗೆ ಉದ್ದಕ್ಕೂ ಬ್ರಿಟಿಷರ ಜೊತೆ ಕೈಗೂಡಿಸಿ ಸ್ವತಂತ್ರ ಭಾರತದ ಮೇಲೆ ಹಿಂದೂತ್ವದ ಹೆಸರಿನಲ್ಲಿ ಬ್ರಾಹ್ಮಣ್ಯದ ಹಾಗೂ ಭೂ-ಮಾಲೀಕ ಮತ್ತು ಬಂಡವಾಳಶಹಿಗಳ ಅಧಿಪತ್ಯವನ್ನು ಮುಂದುವರೆಸಿಕೊಂಡು ಹೋಗಲು ಯತ್ನಿಸುತ್ತಿದ್ದರೆಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ರಾಷ್ಯ್ರೀಯ ಸ್ವಯಂಸೇವಕ ಸಂಘ- ಆರೆಸ್ಸೆಸ್ 1925 ರ ವಿಜಯದಶಮಿ ದಿನದಂದು ನಾಗಪುರದಲ್ಲಿ ಸ್ಥಾಪಿತವಾಯಿತು. ಅದರ ಉದ್ದೇಶ ಬ್ರೀಟಿಷರನ್ನು ಭಾರತದಿಂದ ಓಡಿಸುವುದಾಗಿರಲಿಲ್ಲ. ಬದಲಿಗೆ ಹಿಂದೂ ಸಮಾಜವನ್ನು ಬ್ರಾಹ್ಮಣ್ಯದ ಆಧಾರದಲ್ಲಿ ಮರುಸಂಘಟಿಸುತ್ತಾ ಬ್ರಾಹ್ಮಣೀಯ ಹಿಂದೂ ರಾಷ್ಟ್ರವನ್ನು ಕಟ್ಟುವುದಾಗಿತ್ತು. ಅದರ ಸಂಸ್ಥಾಪಕ ಡಾ. ಹೆಡಗೇವಾರರಂತೂ ಬ್ರಿಟಿಷರ ವಿರುದ್ಧ ಹೋರಾಡುವುದೆಂದರೆ ಜೈಲಿಗೆ ಹೋಗುವುದಲ್ಲ ಎಂದು ಸ್ವಾತಂತ್ರ್ಯ ಹೋರಾಟವನ್ನೇ ತಿರಸ್ಕರಿಸಿದ್ದರು.
ಉಪ್ಪಿನ ಸತ್ಯಾಗ್ರಹ, ಕರ ನಿರಾಕರಣ ಚಳವಳಿ, ಇಂಥಾ ಯಾವುದೇ ಹೋರಾಟಗಳಲ್ಲಿ ಆರೆಸ್ಸೆಸ್ ಕಾರ್ಯಕರ್ತರು ವ್ಯಕ್ತಿಗತ ನೆಲೆಯಲ್ಲಿ ಭಾಗವಹಿಸಬಹುದೇ ವಿನಾ ಸಂಘದ ಸದಸ್ಯರಾಗಿ ಭಾಗವಹಿಸಕೂಡದೆಂಬ ನಿರ್ದೇಶನವಿತ್ತಿದ್ದರು.
ಹೀಗಾಗಿ ಆರೆಸ್ಸೆಸ್ಸು ಎಂದೂ ಸಕಲ ಧರ್ಮೀಯರು ಸಮಾನವಾಗಿ ಭಾವೈಕ್ಯದಿಂದ ಬದುಕುವ ಸ್ವತಂತ್ರ ಭಾರತದ ಕನಸನ್ನೇ ಕಂಡಿರಲಿಲ್ಲ. ಅವರ ರಾಷ್ಟ್ರದ ಕನಸು ಸಾವರ್ಕರ್ ಪ್ರಣೀತ ಸಾಂಸ್ಕೃತಿಕ ರಾಷ್ಟ್ರೀಯತೆ. ಅಂದರೆ ಒಂದೇ ಧರ್ಮ, ಒಂದೇ ಸಂಸ್ಕೃತಿ ಮತ್ತು ಒಂದೇ ಭಾಷೆ ಇರುವರು ಮಾತ್ರ ಒಟ್ಟುಗೂಡಿ ಒಂದು ರಾಷ್ಟ್ರಾವಾಗಲು ಸಾಧ್ಯ. ಅಂತಾ ರಾಷ್ಟ್ರದ ಬುನಾದಿ ಏಕ ಸಂಸ್ಕೃತಿಯೇ ಹೊರತು ಒಂದೇ ಭೂ ಭಾಗದಲ್ಲಿ ಹುಟ್ಟಿದ ಸಹೋದರತ್ವವಲ್ಲ. ಹಾಗೂ ಭಾರತ ಅಂತಾ ಸಾಂಸ್ಕೃತಿಕ ರಾಷ್ಟ್ರವಾಗಬೇಕೆಂದರೆ ಅನ್ಯ ಧರ್ಮೀಯ ಕಲ್ಮಶವನ್ನು ಭಾರತೀಯ ಸ್ರವಂತಿಯಿಂದ ಹೊರಗೆ ಹಾಕಬೇಕು. ಹಾಗೆ ಆಗಬೇಕೆಂದರೆ ಹಿಂದೂಗಳು ಬ್ರಿಟಿಷರಿಗೆ ಸಹಕರಿಸಿ ಸೈನಿಕ ತರಬೇತಿ ಪಡೆದುಕೊಳ್ಳಬೇಕು. ಅವರ ಭೌತಿಕ ಸಹಾಯವಿಲ್ಲದೆ ಈ ಕಾರ್ಯ ಸಾಧ್ಯವಿಲ್ಲ. ಹೀಗಾಗಿ ನಾವು ಬ್ರಿಟಿರ ವಿರುದ್ಧ ಹೋರಾಅಡಲೇ ಬಾರದೆಂಬುದು ಆರೆಸ್ಸೆಸ್ಸಿನ ರಾಜಕೀಯ ತೀರ್ಮಾನವಾಗಿತ್ತು. ಆದ್ದರಿಂದಲೇ ಆರೆಸ್ಸೆಸ್ ಎಂದಿಗೂ ಬ್ರಿಟಿಶ್ ವಸಾಹತುಶಾಹಿ ವಿರೋಧಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಯೇ ಇಲ್ಲ. ಆದರೂ ಇದೀಗ ತಾವೇ ನಿಜವಾದ ಸ್ವಾತಂತ್ರ್ಯ ಹೋರಾಟಗಾರರೆಂದು ಸುಳ್ಳು ಇತಿಹಾಸ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ.
ಅದರ ಭಾಗವಾಗಿ : ಆರೆಸ್ಸೆಸ್ ಸಂಸ್ಥಾಪಕ ಹೆಡ್ಗೇವಾರ್ 1920 ರಲ್ಲಿ ಮತ್ತು 1930 ರಲ್ಲಿ ಹೋರಾಟದಲ್ಲಿ ಭಾಗವಹಿಸಿ ಸೆರೆವಾಸ ಅನುಭವಿಸಿರಲಿಲ್ಲವೇ? ನಾಗಪುರದಲ್ಲಿ ಕಾಂಗ್ರೆಸ್ ಸಮಾವೇಶ ಸಂಘಟಿಸಿರಲಿಲ್ಲವೇ? ಇವೆಲ್ಲವೂ ಸ್ವಾತಂತ್ರ್ಯ ಹೋರಾಟವಲ್ಲವೇ? ಎಂಬ ಕುತಂತ್ರೀ ಪ್ರಶ್ನೆಗಳನ್ನು ಸಂಘಿಗಳು ಕೇಳುತ್ತಾರೆ. ಆದರೆ ವಾಸ್ತವ ಬೇರೆಯೇ ಇದೆ. ಭಾರತ ನ್ಯಾಷನಲ್ ಕಾಂಗ್ರೆಸ್ ಸ್ಥಾಪನೆಯಾದದ್ದು 1`885 ರಲ್ಲಿ. ಭಾರತದ ಸ್ವಾತಂತ್ರ್ಯ ಹೋರಾಟದ ಇತರ ಧಾರೆಗಳಾದ ಆಜಾದ್ – ಭಗತ್ ಸಿಂಗರ ಹಿಂದೂಸ್ಥಾನ್ ಸೊಷಿಯಲಿಸ್ಟ್ ರಿಪಬ್ಲಿಕ್, ಭಾರತ ಕಮ್ಯುನಿಸ್ಟ್ ಪಕ್ಷ ಇತ್ಯಾದಿಗಳು ಸ್ಥಾಪನೆಯಾದದ್ದು ಆ ನಂತರದಲ್ಲಿ. ಆರೆಸ್ಸೆಸ್ ಸ್ಥಾಪನೆಯಾದದ್ದು 1925 ರಲ್ಲಿ. ಹೀಗಾಗಿ ಬಹುಪಾಲು ಎಲ್ಲಾ ಧಾರೆಗಳ ಸ್ವಾತಂತ್ರ್ಯ ಹೋರಾಟಗಾರರೂ ತಮ್ಮ ಸಂಘಟನೆಗಳು ಹುಟ್ಟಿಕೊಳ್ಳುವ ಮುನ್ನ ಪ್ರಾರಂಭದ ದಿನಗಳಲ್ಲಿ ಕಾಂಗ್ರೆಸ್ನ ಭಾಗವಾಗಿದ್ದದ್ದು ಸಹಜ.
ಹಾಗೆಯೇ ಹೆಡಗೇವಾರರು 1925 ರಲ್ಲಿ ಆರೆಸ್ಸೆಸ್ ಸ್ಥಾಪಿಸುವ ಮುನ್ನ ಬಾಲಗಂಗಾಧರ ತಿಲಕರ ಮಾರ್ಗದರ್ಶನದಲ್ಲಿ ನಾಗಪುರದ ಕಾಂಗ್ರೆಸ್ ಅಧಿವೇಶನವನ್ನು ಸಂಘಟಿಸಿದರು. 1920 ರಲ್ಲಿ ಅಸಹಕಾರ ಚಳವಳಿಯ ಭಾಗವಾಗಿ ಒಂದೂವರೆ ವರ್ಷ ಸೆರೆವಾಸವನ್ನು ಅನುಭವಿಸಿದ್ದು ನಿಜ. ಆದರೆ ಅಸಹಕಾರ ಚಳವಳಿಯಲ್ಲಿ ಗಾಂಧಿಯವರು ಹಿಂದೂ-ಮುಸ್ಲಿಂ ಐಕ್ಯತೆಯನ್ನು ಚಳವಳಿಯ ಮುಖ್ಯ ಭೂಮಿಕೆಯಾಗಿಸಿದ್ದು ಹೆಡಗೇವಾರರಿಗೆ ಅಪಾರ ಅಸಮಾಧಾನ ಉಂಟುಮಾಡಿತು. ಹಾಗೂ ಸೆರೆವಾಸದಿಂದ ಹೊರಬಂದ ಕೂಡಲೇ ಸ್ವಾತಂತ್ರ್ಯ ಹೋರಾಟಕ್ಕೆ ಪರ್ಯಾಯವಾದ ಹಿಂದೂ ರಾಷ್ಟ್ರ ಚಳವಳಿ ಕಟ್ಟಲು ರತ್ನಗಿರಿಯಲ್ಲಿದ್ದ ಸಾವರ್ಕರ್ ಅವರನ್ನು ಭೇಟಿ ಮಾಡಿ ದೀಕ್ಷೆ ಪಡೆದರು. ಅದರ ಮುಂದುವರೆಕೆಯಾಗಿಯೇ 1925 ರಲ್ಲಿ ಆರೆಸ್ಸೆಸ್ ಕಟ್ಟಿದರು. ಅವರು ಕಟ್ಟಿದ ಆರೆಸ್ಸೆಸ್ ನ ಘೋಷಿತ ಉದ್ದೇಶ ಬ್ರಿಟಿಷರನ್ನು ಭಾರತ ಬಿಟ್ಟು ಓಡಿಸುವ ಸ್ವಾತಂತ್ಯ ಹೋರಾಟವಾಗಿರಲೇ ಇಲ್ಲ.
ಹೆಡಗೇವಾರರ ಜೀವನ ಚರಿತ್ರೆಯನ್ನು ಬರೆದಿರುವ ಆರೆಸ್ಸೆಸ್ ನಾಯಕ ಹೂ.ವೆ. ಶೇಷಾದ್ರಿಯವರು ತಮ್ಮ Dr.. Hedegevar – The Epoch Maker” ಪುಸ್ತಕದಲಿ ದಾಖಲಿಸಿರುವಂತೆ : “…..After establishing Sangh, Doctor Saheb in his speeches used to talk only of Hindu organization. Direct comment on Government used to be almost nil.” (ಸಂಘವನ್ನು ಸ್ಥಾಪಿಸಿದ ನಂತರ ಅವರು ಕೇವಲ ಹಿಂದೂ ಸಂಘಟನೆಯ ಬಗ್ಗೆ ಮಾತ್ರ ಮಾತಾಡುತ್ತಿದ್ದರು. ಬ್ರಿಟಿಷ್ ಸರ್ಕಾರದ ಬಗ್ಗೆ ಒಂದಿನಿತೂ ಪ್ರಸ್ತಾಪಿಸುತ್ತಿರಲಿಲ್ಲ.) ಅಷ್ಟು ಮಾತ್ರವಲ್ಲ, ಸ್ವಾತಂತ್ರ್ಯ ಹೋರಾಟವನ್ನು ಬ್ರಿಟಿಷ್ ವಿರೋಧಿ ಹೋರಾಟವಾಗಿಸಿರುವ ಬಗ್ಗೇ ಖೇದ ವ್ಯಕ್ತಪಡಿಸಿದ್ದರು. 1929 ರಲ್ಲಿ ಕಾಂಗ್ರೆಸ್ ನ ಲಾಹೋರ ಅಧಿವೇಷನ ಸಂಪೂರ್ಣ ಸ್ವಾತಂತ್ರ್ಯದ ಠರಾವನ್ನು ಅನುಮೋದಿಸಿತು. ಅದರ ಭಾಗವಾಗಿ 1930 ರ ಜನವರಿ 26 ರಂದು ದೇಶದೆಲ್ಲೆಡೆ ಕಾಂಗ್ರೆಸ್ ಕರೆಯ ಭಾಗವಾಗಿ ತ್ರಿವರ್ಣ ಧ್ವಜ ಹಾರಿಸಲು ಕರೆ ನೀಡಲಾಗಿತ್ತು. ದಂಡಿ ಸತ್ಯಾಗ್ರಹ ನಡೆದಿತ್ತು.
ಆಗ, ಹೆಡಗೇವಾರರು, ಸಿಪಿ ಭಿಶ್ಕರ್ ಹಾಗೂ ಹೂ.ವೆ. ಶೇಷಾದ್ರಿಯವರು ದಾಖಲಿಸಿರುವಂತೆ: ಯಾವ ಕಾರಣಕ್ಕೂ ಆರೆಸ್ಸೆಸ್ ಈ ಹೋರಾಟದಲ್ಲಿ ಭಾಗವಹಿಸಬಾರದೆಂದೂ, ಜನವರಿ 26 ರಂದು ತ್ರಿವರ್ಣ ಧ್ವಜದ ಬದಲು ಭಗವಾಧ್ವಜವನ್ನು ಹಾರಿಸಬೇಕೆಂದೂ, ಅತಿ ಆಸಕ್ತಿ ಇದ್ದವರು ವೈಯಕ್ತಿಕವಾಗಿ ಬೇಕಿದ್ದರೆ ಚಳವಳಿಯಲ್ಲಿ ಭಾಗವಹಿಸಬಹುದೆಂದು ಸುತ್ತೋಲೆ ಹೊರಡಿಸಿದರು. ಕಾರ್ಯಕರ್ತರ ಅಪಾರ ಒತ್ತಡ ಹಾಗೂ ದೇಶದ ಭಾವನೆಯನ್ನು ಗಮನಿಸಿ ಹೆಡಗೇವಾರರು ತಮ್ಮ ಸರಸಂಘಚಾಲಕ ಹುದ್ದೆಗೆ ತಾತ್ಕಾಲಿಕವಾಗಿ ರಾಜೀನಾಮೆ ನೀಡಿ, ಅದರ ಜವಾಬ್ದಾರಿಯನ್ನು ಪರಂಜಾಪೆ ಎನ್ನುವವರಿಗೆ ವಹಿಸಿ ತಾವು ವೈಯಕ್ತಿಕ ನೆಲೆಯಲ್ಲಿ ಜಂಗಲ್ ಸತ್ಯಾಗ್ರಹದಲ್ಲಿ ಭಾಗವಹಿಸಿ ಜೈಲು ಶಿಕ್ಷೆ ಅನುಭವಿಸಿದರು. ದಂಡಿ ಸತ್ಯಾಗ್ರಹದಲ್ಲಲ್ಲ. ಅವರ ಜೀವನ ಚರಿತ್ರೆಕಾರರ ಪ್ರಕಾರ ಅವರು ಜೈಲಿಗೆ ಹೋಗಿದ್ದು ದೇಶಾದ್ಯಂತ ಜೈಲಿಗೆ ಬರುತ್ತಿದ್ದ ಯುವಕರ ಸಂಪರ್ಕ ಪಡೆದುಕೊಂಡು ಹಿಂದೂ ರಾಷ್ಟ್ರ ದ ಉದ್ದೇಶಕ್ಕೆ ಸಂಘಟಿಸುವುದಾಗಿತ್ತು. ಆದ್ದರಿಂದ ಆರೆಸ್ಸೆಸ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಬಾರದು ಎನ್ನುವುದು ಆರೆಸ್ಸೆಸ್ ನ ಸಂಸ್ಥಾಪಕರ ಆದೇಶವೇ ಆಗಿತ್ತು.
1942 ರಲ್ಲಿ ಕ್ವಿಟ್ ಇಂಡಿಯಾ ಚಳವಳಿ ನಡೆದಾಗಲಂತೂ ಆರೆಸ್ಸೆಸ್ ನ ಹಿರಿಯ ಸೋದರ ಸಂಘಟನೆಯಾದ ಹಿಂದೂ ಮಹಾ ಸಭಾ ಮತ್ತು ಆರೆಸ್ಸೆಸ್ ನ ಪಿತಾಮಹ ಸಾವರ್ಕರ್ ಸ್ವಾತಂತ್ರ್ಯ ಹೋರಾಟಕ್ಕೆ ದ್ರೋಹ ಬಗೆದು ಬ್ರಿಟಿಷ್ ಸರ್ಕಾರ ಸೇರಿಕೊಂಡಿದ್ದರು. ಅದೂ ಮುಸ್ಲಿಂ ಲೀಗ್ ಜೊತೆಗೆ. ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮ ಪ್ರಾಣವನ್ನೇ ಬಲಿ ನೀಡಿದ ಆಜಾದ್, ಭಗತ್ ಸಿಂಗರಂಥ ಕ್ರಾಂತಿಕಾರಿಗಳ ಬಗ್ಗೆಯೂ ಆರೆಸ್ಸೆಸ್ ಗೆ ಕೀಳು ಅಭಿಪ್ರಾಯವಿತ್ತು. ಆರೆಸ್ಸೆಸ್ ನ ಎರಡನೇ ಸರ್ಸಂಘ ಚಾಲಕ ಗೋಳ್ವಾಲ್ಕರ್ ಅವರು ಆರ್ಗನೈಸರ್ ಪತ್ರಿಕೆಗೆ ಬರೆದ ಲೇಖನದಲ್ಲಿ: “.. ಭಗತ್ ಸಿಂಗ್ ಇನ್ನಿತ್ಯಾದಿ ಕ್ರಾಂತಿಕಾರಿಗಳದ್ದು ತಪ್ಪು ಆದರ್ಶ. ಅವರಲ್ಲಿ ಲೋಪವಿದ್ದದ್ದರಿಂದಲೇ ಅವರು ಯಶಸ್ವಿಯಾಗಲಿಲ್ಲ. ಅವರು ಭಾರತದ ಯುವಕರಿಗೆ ಮಾರ್ಗದರ್ಶಿಯಲ್ಲ” ಎಂದು ಹೇಳಿದ್ದರು. ಹೀಗಾಗಿ ಆರೆಸ್ಸೆಸ್ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಎಂದೂ ಭಾಗವಹಿಸಿರಲಿಲ್ಲ ಎನ್ನುವುದು ಯಾರೋ ಆರೆಸ್ಸೆಸ್ ವಿರೋಧಿಗಳು ಹೇಳುತ್ತಿರುವ ಸುಳ್ಳುಗಳಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಬಾರದೆಂಬುದು ಆರೆಸ್ಸೆಸ್ ನ ನಾಯಕರ ಆದೇಶವೇ ಆಗಿತ್ತು.
ದೇಶ ವಿಭಜನೆಯ ನಂತರ ದೇಶಕ್ಕೆ ಕೊಳ್ಳಿ ಇಡುವ ಕೆಲಸ
ವಾಸ್ತವದಲ್ಲಿ ದೇಶ ವಿಭಜನೆಗೆ ಜಿನ್ನಾ ನೇರ ಕಾರ್ಯಾಚರಣೆಗೆ ಕರೆಕೊಟ್ಟು ಬಂಗಾಳ ಪ್ರಾಂತ್ಯದಲ್ಲಿ ಹಿಂದೂಗಳು ಮುಸ್ಲಿಮರನ್ನು ಮತ್ತು ಮುಸ್ಲಿಮರು ಹಿಂದೂಗಳನ್ನು ಕಗ್ಗೊಲೆ ಮಾಡುತ್ತಿದ್ದಾಗ ಬಿಜೆಪಿಯ ಆದ್ಯ ಗುರು ಹಾಗೂ ಆಗ ಹಿಂದೂ ಮಹಾಸಭಾದ ನಾಯಕರಾಗಿದ್ದ ಶಾಮ ಪ್ರಸಾದ್ ಮುಖರ್ಜಿ ಜಿನ್ನಾರ ಮುಸ್ಲಿಂ ಲೀಗ್ ನೇತೃತ್ವದ ಮಂತ್ರಿಮಂಡಲದಲ್ಲಿ ಮಂತ್ರಿಯಾಗಿಯೇ ಮುಂದುವರೆದಿದ್ದರು. ಅದೇ ರೀತಿ ಸಿಂಧ್ ಪ್ರಾಂತ್ಯದಲ್ಲೂ ಮುಸ್ಲಿಂಲೀಗ್ ಮತ್ತು ಹಿಂದೂ ಮಹಾಸಭಾಗಳ ಜಂಟಿ ಮಂತ್ರಿಮಂಡಲ ಹಿಂದೂ-ಮುಸ್ಲಿಂ ನರಮೇಧಕ್ಕೆ ಪ್ರತ್ಯಕ್ಷ ಕುಮ್ಮಕ್ಕು ಕೊಟ್ಟಿತ್ತು. ಮಹಾಸಭಾದ ನೆರಳಲ್ಲಿ ಆರೆಸ್ಸೆಸ್ಸ್ ಕಾರ್ಯಕರ್ತರು ಕೋಮು ನರಮೇಧ ಮಾಡುತ್ತಾ ದೇಶಕ್ಕೆ ಕೊಳ್ಳಿ ಇಡುವ ಕೆಲಸ ಮಾಡುತ್ತಿದ್ದರು.
ಆರೆಸ್ಸೆಸ್ಮತ್ತು ಹಿಂದೂ ಮಹಾಸಭಾಗಳ ಈ ಜಂಟಿ ದೇಶವಿರೋಧಿ ಭಯೋತ್ಪಾದಕ ದ್ವೇಷ ರಾಜಕಾರಣದ ಉತ್ತುಂಗವೇ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ನಾಥೂರಾಮ್ ಗೋಡ್ಸೆ ಜನನ ಮತ್ತು ಗಾಂಧಿ ಹತ್ಯೆ. ಅದು ಗಾಂಧಿ ಹತ್ಯೆಗೆ ನಿಲ್ಲದೇ ಈವರೆಗೂ ಹತ್ತು ಹಲವು ಆಯಾಮ ಮತ್ತು ವಿಸ್ತಾರಗಳನ್ನು ಪಡೆದುಕೊಂಡು ಬೆಳೆಯುತ್ತಲೇ ಇದೆ. ದೇಶ ವಿಭಜನೆಯ ಕಾಲದ ಪ್ರಕ್ಷುಬ್ಧ ಪರಿಸ್ಥಿತಿಯನ್ನು ಆರೆಸ್ಸೆಸ್ ಹೇಗೆ ದ್ವೇಷ ಭಯೋತ್ಪಾದನೆಗೆ ಬಳಸಿಕೊಂಡರು ಎಂಬುದನ್ನು ದಾಖಲಿಸಿದ್ದು ಯಾರೋ ಎqಪಂಥೀಯ ಇತಿಹಾಸಕಾರರಲ್ಲ. ಆಗ ಭಾರತದ ಪ್ರಥಮ ರಾಷ್ಟ್ರಪತಿಯಾಗಿದ್ದ ಬಾಬು ರಾಜೇಂದ್ರ ಪ್ರಸಾದ್ ಅವರು. ಬಾಬು ರಾಜೇಂದ್ರ ಪ್ರಸಾದ್ ಅವರು ಗೃಹಮಂತ್ರಿ ಸರ್ದಾರ್ ಪಟೇಲ್ ಅವರಿಗೆ ಬರೆದ ಈ ಪತ್ರವನ್ನು ಗಮನಿಸಿ ..
RSS ಕಿಂಚಿತ್ತೂ ಬದಲಾಗದೆ ತನ್ನ ಪರಂಪರೆಯನ್ನು ಮುಂದುವರೆಸಿರುವುದಕ್ಕೆ ಹೆಮ್ಮೆ ಪಡಿ!!!!
“ಆರೆಸ್ಸೆಸ್ಸಿಗರು ದೇಶಾದ್ಯಂತ ಗಲಭೆ ಸೃಷ್ಟಿಸುವ ಯೋಜನೆಗಳನ್ನು ಮಾಡುತ್ತಿದ್ದಾರೆಂಬ ಮಾಹಿತಿ ನನಗೆ ಬಂದಿದೆ.ಅವರಲ್ಲಿ ಹಲವರು ಮುಸ್ಲಿಮರಂತೆ ಕಾಣುದ ದಿರಿಸನ್ನು ಧರಿಸಿ ಹಿಂದೂಗಳ ಮೇಲೆ ದಾಳಿ ನಡೆಸಿ ಹಿಂದೂಗಳನ್ನು ಪ್ರಚೋದಿಸುತ್ತಿದ್ದಾರೆ.ಅದೇರೀತಿ ಅವರಲ್ಲಿ ಕೆಲವರು ಮುಸ್ಲಿಮರ ಮೇಲೆ ದಾಳಿ ಮಾಡಿ ಮುಸ್ಲಿಮರನ್ನು ಪ್ರಚೋದಿಸುತ್ತಿದ್ದಾರೆ. ಹಿಂದೂ-ಮುಸ್ಲಿಮರ ನಡುವೆ ಈ ರೀತಿ ಯೋಜಿತ ಅಶಾಂತಿ ಉಂಟುಮಾಡುತ್ತಿರುವುದು ಮುಂದೆ ದೊಡ್ಡ ಕೋಲಾಹಲವನ್ನೇ ಸೃಷ್ಟಿಸಲಿದೆ “
- ಬಾಬು ರಾಜೇಂದ್ರ ಪ್ರಸಾದ್ , ಮಾರ್ಚ್ 14, 1948
(Nehru-Patel: Agreement Within Difference?Select Documents & Correspondences 1933-1950, NBT, Delhi, p. 43.)
ಭಾರತೀಯ ಸಂವಿಧಾನ ಸ್ವೀಕರಿಸಲು ಅನರ್ಹ- ಆರೆಸ್ಸೆಸ್
1949 ರ ನವಂಬರ್ 26 ರಂದು ಸಂವಿಧಾನ ಬರಹ ಮುಗಿದು ನಾಡಿಗೆ ಅರ್ಪಣೆಯಾದ ಕೇವಲ ನಾಲ್ಕು ದಿನಗಳ ನಂತರ 1949 ರ ನವಂಬರ್ 30 ರಂದು ಆರೆಸ್ಸೆಸ್ಸಿನ ಮುಕಪತ್ರಿಕೆಯಾದ ಆರ್ಗನೈಸರ್ ಪತ್ರಿಕೆಯಲ್ಲಿ ಸಂವಿಧಾನವನ್ನು ಹೀಗೆಳೆಯುತ್ತಾ ಹೀಗೆ ಬರೆದುಕೊಳ್ಳುತ್ತಾರೆ: “..ಭಾರತದ ಸಂವಿಧಾನದ ಬಗ್ಗೆ ಅತ್ಯಂತ ಹೀನಾಯವಾದದ್ದು ಏನೆಂದರೆ ಅದರಲ್ಲಿ ಭಾರತೀಯವಾದದ್ದು ಏನೂ ಇಲ್ಲ. ವಾಸ್ತವವಾಗಿ ನಮ್ಮ ಮನುಸ್ಮೃತಿ ಅತ್ಯಂತ ಪ್ರಾಚೀನವಾಗಿದ್ದು ಜಗತ್ತಿನ ಜನರೆಲ್ಲಾ ಸ್ವಪ್ರೇರಿತರಾಗಿ ಅದರ ಬಗ್ಗೆ ಅಪಾರ ಆದರವನ್ನು ವ್ಯಕ್ತಪಡಿಸುತ್ತಾರೆ. ಆದರೆ ನಮ್ಮ ಸಂವಿಧಾನ ಪಂಡಿತರಿಗೆ ಅದು ಏನೂ ಅಲ್ಲ”
ಎಂದು ಟೀಕಿಸುತ್ತಾರೆ.. “…ಭಾರತದ ಸಂವಿಧಾನದಲ್ಲಿ ಸನಾತನ ಭಾರತದಲ್ಲಿ ವಿಕಸನಗೊಂಡ ಸಂವಿಧಾನದ ಉಲ್ಲೇಖವೇ ಇಲ್ಲ. ಈಗಲೂ ಜಗತ್ತಿನಾದ್ಯಂತ ಮನಸ್ಮೃತಿಯು ಅಪಾರವಾದ ಗೌರವವವನ್ನೂ ಮತ್ತು ಎಲ್ಲರ ಸ್ವಪ್ರೇರಿತ ಮನ್ನಣೆಯನ್ನೂ ಪಡೆದುಕೊಳ್ಳುತ್ತದೆ. ಆದರೆ ನಮ್ಮ ಸಂವಿಧಾನ ಪಂಡಿತರಿಗೆ ಇದರ ಬಗ್ಗೆ ಅರಿವೇ ಇಲ್ಲ” ಎಂದು ಸಮಾನತೆಯ ಸಂವಿಧಾನದ ಬದಲಿಗೆ ತಾರತಮ್ಯದ ಮನುಸ್ಮೃತಿಯನ್ನು ಎತ್ತಿಹಿಡಿಯುತ್ತದೆ. ಗೋಳ್ವಾಲ್ಕರ್ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಂಬೇಡ್ಕರ್ ಅವರ ಜಾತಿ ವಿನಾಶ ಯೋಜನೆಯ ವಿರುದ್ಧ ಹೀಗೆ ಕಿಡಿ ಕಾರುತ್ತಾರೆ: “.. ಈ॒ ಜಾತಿ ವಿನಾಶದ ಪ್ರತಿಪಾದನೆಗಳು ಭಾರತದ ರಾಜಕೀಯವನ್ನು ಕುಲಗೆಡಿಸುತ್ತಿದೆ. ..ಆದ್ದರಿಂದ ಕೆಲವರು ಭಾವಿಸುವಂತೆ ಆರೆಸ್ಸೆಸ್ ಭಾರತವನ್ನು ಕೇವಲ ಇನ್ನೂರು ವರ್ಷ ಹಿಂದಕ್ಕೆ ತೆಗೆದುಕೊಂಡು ಹೋಗಲು ಬಯಸುತ್ತದೆ ಎಂಬುದು ಸುಳ್ಳು. ವಾಸ್ತವವಾಗಿ ನಾವು ಭಾರತವನ್ನು ಇನ್ನಷ್ಟು ಹಿಂದಕ್ಕೆ , ಕನಿಷ್ಟ ಸಾವಿರ ವರ್ಷದ ಹಿಂದಿನ ಉಜ್ವಲ ಯುಗಕ್ಕೆ ಕೊಂಡೊಯ್ಯಲು ಬಯಸುತ್ತೇವೆ”
(The Organiser, 26 January 1962)
ಭಾರತದ ಧ್ವಜ V/S ಭಗವಾಧ್ವಜ
1928 ರ ಸುಮಾರಿಗೆ ಅರೆಸ್ಸೆಸ್ ಭಗವಾಧ್ವಜವನ್ನು ತನ್ನ ಲಾಂಚನವನ್ನಾಗಿ ಸ್ವೀಕರಿಸಿತು. ಕೇಸರಿ ಬಣ್ಣದ ಹಾಗೂ ತ್ರಿಕೋನಾಕೃತಿಯ ಭಗವಧ್ವಜವನ್ನೇ ಆರೆಸ್ಸೆಸ್ ಏಕೆ ತನ್ನ ಬಾವುಟವನ್ನಾಗಿ ಸ್ವೀಕರಿಸಿತು? ಈ ಬಗ್ಗೆ ಹೆಡಗೇವಾರರ ಸಹಚರನಾಗಿದ್ದ ಎನ್. ಎಚ್. ಪಾಲ್ಕರ್ ಅವರು ತಮ್ಮ SAFRRON FLAG ಪುಸ್ತಕದಲ್ಲಿ ಏಕೆ ಮತ್ತು ಹೇಗೆ ಭಗವಧ್ವಜವು ಆರೆಸ್ಸೆಸ್ ಆಶಯದ ಹಿಂದೂ ರಾಷ್ಟ್ರದ ಪ್ರತೀಕವಾಗಿದೆ ಎಂದು ವಿವರಿಸುತ್ತಾರೆ. ಆರೆಸ್ಸೆಸ್ ಪ್ರಕಾರ ಭಗವಧ್ವಜವನ್ನು ವೇದಗಳ ಕಾಲದಲ್ಲಿ ಅರುಣಕೇತು ಎಂದು ಕರೆಯುತ್ತಿದ್ದರು. ಆದರೆ ಆ ನಂತರ ಭಗವಧ್ವಜದ ಬಳಕೆಯು ಪ್ರಧಾನವಾಗಿ ಆಗಿರುವುದು ಬುದ್ಧ ಭಾರತದ ವಿರುದ್ಧ ಶಂಕರಾಚಾರ್ಯರ ನೇತೃತ್ವದಲ್ಲಿ ಸಾಧಿಸಲಾದ ಬ್ರಾಹ್ಮಣ್ಯದ ಪುನರುತ್ಥಾನದಲ್ಲಿ. ಅರ್ಥಾತ್ ಭಗವಾಧ್ವಜವು ಮಹಿಳೆ, ಶೂದ್ರ ಮತ್ತು ದಲಿತರ ಮೇಲೆ ಬ್ರಾಹ್ಮಣ್ಯದ ವಿಜಯದ ಪ್ರತೀಕವಾಗಿದೆ. ಆದರೆ ಬ್ರಾಹ್ಮಣ್ಯದ ಪುನರುತ್ಥಾನವನ್ನು ಹಿಂದೂತ್ವದ ವಿಜಯವೆಂದು ನಂಬಿಸುವ ಆರೆಸ್ಸೆಸ್ ಮತ್ತವರ ಸಿದ್ಧಾಂತಿಗಳು ಭಾರತದ ಮೇಲೆ ನಡೆದ ಎಲ್ಲಾ ಪರಕೀಯರ ದಾಳಿಗಳನ್ನು ಎದುರಿಸಲು ಹಿಂದೂ ರಾಜರು ಇದೇ ಬಾವುಟವನ್ನೇ ಬಳಸಿದ್ದರು ಎಂದು ಯಾವುದೇ ಪುರಾವೆಯಿಲ್ಲದೆ ಪ್ರತಿಪಾದಿಸುತ್ತಾರೆ. ಅದು ಸಹಜವೇ ಅಗಿದೆ. ಏಕೆಂದರೆ ಸಂಘಪರಿವಾರದ ಯಾವುದೇ ಪ್ರತಿಪಾದನೆಗಳಿಗೆ ಅವರ ನಂಬಿಕೆಯೇ ಪುರಾವೆಯೇ ಹೊರತು ಸಾಕ್ಷ್ಯಾಧರಗಳು ಇರುವುದಿಲ್ಲ.
ಅವರ ಪ್ರಕಾರ ಈ ದೇಶದ ಗುಲಾಮಗಿರಿಯೆಂದರೆ ಬ್ರಿಟಿಷ್ ದಾಸ್ಯವಲ್ಲ. ಮುಸ್ಲಿಮ್ ಆಳ್ವಿಕೆ ಮತ್ತು ಮುಸ್ಲಿಮರು ಈ ದೇಶದವರಲ್ಲ. ಹಾಗೆಯೇ ಕ್ರಿಶ್ಚಿಯನ್ನರು ಕೂಡ. ಈ ದೇಶದ ಚರಿತ್ರೆಯಲ್ಲಿ ನಾವು ವೈಭವದ ಯುಗವೆಂದು ಪರಿಗಣಿಸಬೇಕಿರುವುದು ಹಾಗೂ ಪುನರ್ ಸ್ಥಾಪಿಸಬೇಕಿರುವುದು ಬುದ್ಧಧರ್ಮವನ್ನು ನಾಶ ಮಾಡಿದ ಗುಪ್ತರ ಕಾಲದ ಬ್ರಾಹ್ಮಣ್ಯವನ್ನು. ಹೀಗಾಗಿ ಭಗವಾಧ್ವಜವೇ ಅವರ ಚರಿತ್ರೆ ಹಾಗೂ ಭವಿಷ್ಯದ ಆಶಯಗಳ ಸಂಕೇತ.
ಆದ್ದರಿಂದ ಅವರು ಪ್ರತಿಪಾದಿಸುತ್ತಿರುವುದು ಸನಾತನ ಭಗವಾಧ್ವಜವನ್ನೂ ಅಲ್ಲ. ಆರೆಸ್ಸೆಸ್ ಮಾರ್ಪಡಿಸಿರುವ ಭಗವಾಧ್ವಜವನ್ನು !ಹೀಗೆ ಸ್ವತಂತ್ರ ಭಾರತದ ಧ್ವಜ ಮತ್ತು ಭಗವಾಧ್ವಜಗಳು ಎರಡು ತದ್ವಿರುದ್ಧ ಆಶಯ, ಚರಿತ್ರೆ ಮತ್ತು ಭವಿಷ್ಯಗಳ ಪ್ರತೀಕಗಳೇ ಆಗಿವೆ.ಆದ್ದರಿಂದಲೇ ಸಂಘಪರಿವಾರವು ಸ್ವಾತಂತ್ರ್ಯ ಹೋರಾಟದುದ್ದಕ್ಕೂ ಆ ನಂತರವು ಸ್ವತಂತ್ರ ಭಾರತ ಧ್ವಜಕ್ಕೆ ನಿರಂತರ ಅವಮಾನವನ್ನೇ ಮಾಡುತ್ತಲೇ ಬಂದಿದೆ.
1949 ರ ನವಂಬರ್ನಲ್ಲಿ ಸಂಘಪರಿವಾರದ ಮುಖಪತ್ರಿಕೆ ಆರ್ಗನೈಸರ್ ನಲ್ಲಿ ಬರೆಯಲಾದ ಸಂಪಾದಕೀಯವೊಂದು: “.. ವಿಧಿಯಾಟದ ಭಾಗವಾಗಿ ಅಧಿಕಾರ ಪಡೆದುಕೊಂಡಿರುವ ಇಂದಿನ ಸರ್ಕಾರವು ತ್ರಿವರ್ಣ ಧ್ವಜವನ್ನು ಭಾರತದ ರಾಷ್ರಧ್ವಜವನ್ನಾಗಿ ಅಂಗೀಕರಿಸಿದೆ. ಆದರೆ ಭಾರತದ ಜನರೆಂದೂ ತ್ರಿವರ್ಣ ಧ್ವಜವನ್ನು ತಮ್ಮ ಬಾವುಟವನ್ನಾಗಿ ಅಂಗೀಕರಿಸಲಾರರು. ಏಕೆಂದರೆ ಮೂರು ಎಂಬ ಸಂಖ್ಯೆ ಭಾರತೀಯರ ಪಾಲಿಗೆ ಕೆಟ್ಟ ಶಕುನವಾಗಿದೆ” ಎಂದೆಲ್ಲ ಬರೆಯುತ್ತಾರೆ. ತ್ರಿಶೂಲ, ತ್ರಿಮೂರ್ತಿ ಎಂದೆಲಾ ತ್ರಿವಳಿಗಳನ್ನೇ ಆರಾಧಿಸುವ ಹಿಂದೂ ಧರ್ಮದ ವಕ್ತಾರರು ನೀಡಿದ ಹೇಳಿಕೆಯಿದು.
ಸ್ವಾತಂತ್ರ್ಯಾ ನಂತರದಲ್ಲೂ ಮುಂದುವರೆದ ದೇಶದ್ರೋಹ- ಧ್ವಜದ್ರೋಹ
ಹೀಗೆ ಭಾರತ ರಾಷ್ಟ್ರ ಮತ್ತು ರಾಷ್ಟ್ರಧ್ವಜದ ಬಗ್ಗೆ ಸಂಘಪರಿವಾರದ ತಿರಸ್ಕಾರ ಮತ್ತು ಭಾರತವನ್ನು ಹಿಂದೂರಾಷ್ಟ್ರ ಅರ್ಥಾತ್ ಬ್ರಾಹ್ಮಣ ರಾಷ್ಟ್ರವನ್ನಾಗಿ ಮಾಡುವ ಪ್ರಯತ್ನಗಳು 47 ರ ನಂತರವೂ ಮುಂದುವರೆಯಿತು. ಹಾಗೆ ನೋಡಿದರೆ 2002 ರ ವರೆಗೂ ಆರೆಸ್ಸೆಸ್ ಕಚೇರಿಗಳ ಮೇಲೆ ಭಾರತದ ಬಾವುಟ ಹಾರಾಡಲೇ ಇರಲಿಲ್ಲ. 2001 ರಲ್ಲಿ “ರಾಷ್ಟ್ರಪ್ರೇಮಿ ಯುವದಳ ” ಎಂಬ ಸಂಘಟನೆಯ ಕಾರ್ಯಕರ್ತರು ಆರೆಸ್ಸೆಸ್ ನ ನಾಗಪುರದ ಪ್ರಧಾನ ಕಚೇರಿಯ ಮೇಲೆ ಬಲವಂತವಾಗಿ ರಾಷ್ಟ್ರಧ್ವಜವನ್ನು ಹಾರಿಸಿದರು. ಅವರನ್ನು ಹಿಡಿದು ಆರೆಸ್ಸೆಸ್ ನ ದೇಶಭಕ್ತ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ್ದರು. ಆ ನಂತರ 2002 ರಲ್ಲಿ ಮೊದಲ ಬಾರಿಗೆ ಆರೆಸ್ಸೆಸ್ ನ ಕಚೇರಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು. ಏಕೆ ಹೀಗೆ? 2002 ರಲ್ಲಿ ವಾಜಪೇಯಿ ಸರ್ಕಾರ ರಾಷ್ಟ್ರಧ್ವಜವನ್ನು ಖಾಸಗಿಯವರು ಹಾರಿಸಬಹುದೆಂದು ಭಾರತದ ಧ್ವಜ ನಿಯಮಗಳಿಗೆ ತಿದ್ದುಪಡಿ ತರುವವರೆಗೆ ಖಾಸಗಿ ವ್ಯಕ್ತಿ-ಸಂಘಟನೆಗಳು ರಾಷ್ಯ್ರಧ್ವಜವನ್ನು ಹಾರಿಸುವಂತಿರಲಿಲ್ಲವಾದ್ದರಿಂದ ಆವರೆಗೆ ಆರೆಸ್ಸೆಸ್ ಕಚೇರಿಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಿರಲಿಲ್ಲ ಎಂಬ ಸಬೂಬನ್ನು ಆರೆಸ್ಸೆಸ್ ನೀಡುತ್ತದೆ. ಆದರೆ ಭಾರತದ 1955 ರ ಭಾರತದ ರಾಷ್ಟ್ರ ಧ್ವಜದ ನಿಯಮಗಳಾಗಲೀ, 1971 ರ ನಿಯಮಗಳಾಗಲೀ ಖಾಸಗಿ ವ್ಯಕ್ತಿಗಳು ಮತ್ತು ಸಂಘಟನೆಗಳು ಪ್ರತಿದಿನ ರಾಷ್ಟ್ರಧ್ವಜವನ್ನು ಹಾರಿಸುವುದನ್ನು ಮಾತ್ರ ನಿಷೇಧಿಸುತ್ತವೆ.
ಅರ್ಥಾತ್ .. ರಾಷ್ಟ್ರೀಯ ದಿನಗಳಾದ ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವ ದಿನ ಇನ್ನಿತ್ಯಾದಿ ಆರು ದಿನಗಳಂದು ಎಲ್ಲಾ ವ್ಯಕ್ತಿಗಳೂ ಹಾಗೂ ಸಂಘಟನೆಗಳು ತಮ್ಮ ಮನೆ ಮತ್ತು ಕಚೇರಿಗಳ ಮೇಲೆ ರಾಷ್ರಧ್ವಜವನ್ನು ಹಾರಿಸಲು ಅನುಮತಿಸುತ್ತದೆ. ಆದರೂ ಆರೆಸ್ಸೆಸ್ ಕಚೇರಿಯ ಮೇಲೆ ರಾಷ್ರಧ್ವಜದ ಬದಲಿ ಭಗ್ವಾಧ್ವಜ ಮಾತ್ರ ಹಾರುತ್ತಿರುವುದಕ್ಕೆ ಕಾರಣ ಬಿಡಿಸಿ ಹೇಳಬೇಕಿಲ್ಲ. 2002 ರ ತನಕ ತಮ್ಮ ಕಚೇರಿಗಳ ಮೇಲೆ ಉದ್ದೇಶಪೂರ್ವಕವಾಗಿ ರಾಷ್ಟ್ರ ಧ್ವಜ ಹಾರಿಸದ ಈ ಸಂಘೀ ಗಳು 1994 ರಲ್ಲಿ ಹುಬ್ಬಳ್ಳಿಯಲ್ಲಿ ಅಂಜುಮಾನ್ ಮೈದಾನದ ಮೇಲೆ, ಶ್ರೀನಗರದ ಲಾಲ್ ಚೌಕಿನಲ್ಲಿ ರಾಷ್ಟ್ರಧ್ವಜ ಹಾರಿಸಲು ಮುಂದಾಗಿದ್ದರು. ಅದರ ಹಿಂದೆ ಭಾರತದ ಧ್ವಜವನ್ನು ಕೂಡಾ ಭಗವಾಧ್ವಜದ ಉದ್ದೇಶಕ್ಕೆ ಪೂರಕವಾಗಿ ಬಳಸಿಕೊಳ್ಳುವ ಉದ್ದೇಶವೇ ಇತ್ತು. ರಾಷ್ಟ್ರಭಕ್ತಿಯಲ್ಲ. ಇದು RSS. ಇದು ಸಾವರ್ಕರ್. ಇದು ಮೋದಿ ಭಾಷಣದ ತಾತ್ಪರ್ಯ. ಇತಿಹಾಸದಲ್ಲಿ ಸಾವರ್ಕರ್ ಗೆ ಮತ್ತು ಆರೆಸ್ಸೆಸ್ ಗೆ ಇಲ್ಲದ ಪಾತ್ರವನ್ನು ಆರೋಪಿಸುವುದರ ಹಿಂದೆ ವರ್ತಮಾನದಲ್ಲಿ ತಾವು ನಡೆಸುತ್ತಿರುವ ಮತ್ತು ಭವಿಷ್ಯದಲ್ಲಿ ನಡೆಸಲಿರುವ ವಿನಾಶಕ್ಕೆ ಸಮರ್ಥನೆಯನ್ನು, ಸಮ್ಮತಿಯನ್ನು ರೂಢಿಸಿಕೊಳ್ಳುವ ಹುನ್ನಾರವೇ ಇದೆಯೆಂಬುದನ್ನು ಭಾರತ ಅರೆಕ್ಷಣವೂ ಮರೆಯಬಾರದು.
- ಶಿವಸುಂದರ್
ಜನಪರ ಚಿಂತಕರು, ಲೇಖಕರು..


Leave a reply